ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ; 3 ವರ್ಷಗಳ ನಂತರ ಒಂದಾದ ನಾಯಕರು
ಬೆಳಗಾವಿ, ಅಕ್ಟೋಬರ್ 31: ಮೂರು ವರ್ಷಗಳ ನಂತರ ಪ್ರಭಾವಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಒಂದೇ ಕಡೆ ಕಾಣಿಸಿಕೊಂಡು ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ನಾಯಕರು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಿ ಎಂದು ವರಿಷ್ಠರು ಸೂಚಿಸಿದ ಮೇರೆಗೆ ಎರಡು ದಿನಗಳ ಹಿಂದೆ ಒಂದೇ ವೇದಿಕೆಯಲ್ಲಿ ಸುಮಾರು ಹತ್ತಕ್ಕೂ ಅಧಿಕ ನಾಯಕರು ಸುದ್ದಿಗೋಷ್ಠಿ ನಡೆಸಿದ್ದರು. ಸಚಿವ ರಮೇಶ್ ಜಾರಕಿಹೊಳಿ ಈ ಸುದ್ದಿಗೋಷ್ಠಿಗೆ ಹಾಜರಿರಲಿಲ್ಲ. ಆದರೆ ಕಹಿ ಘಟನೆ ಮರೆತು ಜಿಲ್ಲೆಯ ನಾಯಕರು ಒಂದಾಗಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಅಗ್ರಸ್ಥಾನ ಹೊಂದಬೇಕಿದೆ ಎಂದು ತಿಳಿಸಿದ್ದರು.
ಡಿಸಿಸಿ ಬ್ಯಾಂಕ್ ಚುನಾವಣೆ: 16 ಕ್ಷೇತ್ರದಲ್ಲಿ ಅವಿರೋಧ ಆಯ್ಕೆಗೆ ಪ್ರಯತ್ನ
ಇದೀಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಅಂತಿಮ ಹಂತಕ್ಕೆ ಬಂದಿದ್ದು, ಹಾವು-ಮುಂಗುಸಿಯಂತಿದ್ದ ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ ಶನಿವಾರ ಒಟ್ಟಿಗೆ ಪ್ರತ್ಯಕ್ಷರಾಗಿದ್ದಾರೆ. ಇದೇ ವೇಳೆ ಬೆಳಗಾವಿಯ ಡಿಸಿಸಿ ಬ್ಯಾಂಕ್ ಕೊಠಡಿಯಲ್ಲಿ ಇಬ್ಬರೂ ಗೌಪ್ಯಸಭೆ ನಡೆಸಿದರು. ಸದ್ಯಕ್ಕೆ 16 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು ಕಗ್ಗಂಟಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವೊಲಿಸಲು ಕಸರತ್ತು ನಡೆಸಿದರು.
ನಾಮಪತ್ರ ಹಿಂಪಡೆಯಲು ಖಾನಾಪುರ, ರಾಮದುರ್ಗ ಹಾಗೂ ಉಣ್ಣೆ ನಿಗಮದ ಅಭ್ಯರ್ಥಿಗಳು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವೊಲಿಕೆಗೆ ಡಿಸಿಎಂ ಸವದಿ, ಜಾರಕಿಹೊಳಿ ಮುಂದಾಗಿದ್ದರು. ಆದರೆ ಮನವೊಲಿಕೆ ಯಶಸ್ವಿಯಾಗಿಲ್ಲ.
16 ಕ್ಷೇತ್ರಗಳಲ್ಲಿ 13 ಕ್ಷೇತ್ರಗಳ ಅವಿರೋಧ ಆಯ್ಕೆಯಾಗಿದೆ. ಉಳಿದ ಮೂರು ಕ್ಷೇತ್ರಗಳ ಅವಿರೋಧ ಆಯ್ಕೆಗೆ ಪ್ರಯತ್ನ ಮಾಡಿದೆವು. ಆದರೆ ಸಮಯದ ಅಭಾವದ ಕಾರಣ ಮೂರು ಕ್ಷೇತ್ರಗಳ ಅವಿರೋಧ ಆಯ್ಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ನವೆಂಬರ್ 6ಕ್ಕೆ ಮೂರು ಕ್ಷೇತ್ರಗಳ ಚುನಾವಣೆ ನಡೆಯಲಿದೆ.