ಕಾರ್ಮಿಕರ ದಿನಾಚರಣೆ: ಕೋವಿಡ್ ವಾರಿಯರ್ಸ್ಗೆ ಶಾಸಕ ಗಣೇಶ್ ಹುಕ್ಕೇರಿಯಿಂದ ಸಿಹಿ ಸುದ್ದಿ
ಬೆಳಗಾವಿ, ಮೇ 1: ಕೊರೊನಾ ಸಂಕಷ್ಟದ ಸಮಯದಲ್ಲಿ ಕೋವಿಡ್ ವಾರಿಯರ್ಸ್ಗೆ ತಮ್ಮ ಮೂರು ತಿಂಗಳ ಸಂಬಳವನ್ನು ತಮ್ಮ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ನೀಡಲು ಶಾಸಕ ಗಣೇಶ್ ಹುಕ್ಕೇರಿ ಮುಂದಾಗಿದ್ದಾರೆ.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕರಾದ ಗಣೇಶ್ ಹುಕ್ಕೇರಿ ತಮ್ಮ ಕ್ಷೇತ್ರದ front line covid warriors ಆದ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳ ಸಂಬಳವನ್ನು ಆಶಾ ಕಾರ್ಯಕರ್ತೆಯರಿಗೆ ನೀಡಲು ತೀರ್ಮಾನ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಮನವಿಯಂತೆ ಒಂದು ತಿಂಗಳ ಸಂಬಳವನ್ನು ಕೋವಿಡ್ ನಿಧಿಗೆ ನೀಡಿದ್ದಾರೆ. ಅದರ ಜೊತೆಗೆ ಅದರ ಮುಂದಿನ ಮೂರು ತಿಂಗಳ ಸಂಬಳವನ್ನೂ ಸಹ ಕೋವಿಡ್ ವಾರಿಯರ್ಸ್ಗೆ ಬಳಕೆ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಖುದ್ದು ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದು ಕೊಂಡಿರುವ ಶಾಸಕ ಗಣೇಶ್ ಹುಕ್ಕೇರಿ, ""ರಾಜ್ಯ ಸರ್ಕಾರ ನನಗೆ ನೀಡುವ ಸಂಬಳದಲ್ಲಿ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಮನವಿಯಂತೆ ಕೋವಿಡ್ ನಿಧಿಗೆ ನೀಡುತ್ತಿದ್ದೇನೆ. ಅದನ್ನು ಹೊರತು ಪಡಿಸಿ, ಅದರ ಮುಂದಿನ ಮೂರು ತಿಂಗಳ ಸಂಬಳವನ್ನು ನನ್ನ ಕ್ಷೇತ್ರದ front line covid warriors ಗಳಾದ ಆಶಾಕಾರ್ಯಕರ್ತೆಯರಿಗೆ ನೀಡಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ.
ಇಂದು ಮೇ 1 ಕಾರ್ಮಿಕರ ದಿನಾಚರಣೆ, ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಹಲವಾರು ಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ಹೋರಾಡುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಕಾರ್ಮಿಕರಲ್ಲಿ, ನಮ್ಮ ಆಶಾ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯವಾದುದು.
"ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು" ಎಂದು ಡಿ.ವಿ ಗುಂಡಪ್ಪನವರು ಹೇಳಿದಂತೆ, ತಮ್ಮ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ಮನವಿಟ್ಟು ಮಾಡಿ, ನಮ್ಮ ನಾಡಿನ ಆರೋಗ್ಯ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಂಡು ಹೋಗುವಲ್ಲಿ ಬಹು ಮುಖ್ಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ನಮ್ಮ ಆಶಾ ಕಾರ್ಯಕರ್ತೆಯರು.
"ಆಶಾ' ಪದದ ಅರ್ಥ "ಭರವಸೆ'(Hope), ಎಂಬುದನ್ನೇನು ನಾನಿಲ್ಲಿ ವಿಶೇಷವಾಗಿ ಹೇಳಬೇಕಿಲ್ಲ. ಕೊರೊನಾ ಮಹಾಮಾರಿಯ ಜೊತೆ ನಾವೆಲ್ಲ ಹೋರಾಡುತ್ತಿರುವ ಅತಿ ಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ನಮ್ಮ ನಾಡಿಗೆ ಆಶಾಕಿರಣ(Ray of hope)ವಾಗಿದ್ದಾರೆ ಎಂದರೆ ತಪ್ಪಾಗಲಾರದು.
ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಸಮುದಾಯಕ್ಕೆ ತಿಳಿವಳಿಕೆ ನೀಡುವುದರಿಂದ ಹಿಡಿದು ಕ್ಷೇತ್ರದ ನಾಗರಿಕರಿಗೆಲ್ಲರಿಗೂ ಕೊರೊನಾ ಲಸಿಕೆಯನನ್ನು ಹಾಕಿಸುವವರೆಗೂ ಹಲವಾರು ಜವಾಬ್ದಾರಿಗಳನ್ನು ವಹಿಸುವ ಇವರ ಕಾರ್ಯ ಶ್ಲಾಘನಾರ್ಹ. ಹಾಗಾಗಿ ಈ ಕಾರ್ಯಕರ್ತೆಯರಿಗೆ ನನ್ನಿಂದ ಒಂದು ಪುಟ್ಟ ಕಾಣಿಕೆಯನನ್ನು ಈ ಕಾರ್ಮಿಕ ದಿನದಂದು ನೀಡಲು ಇಷ್ಟಪಡುತ್ತೇನೆ. ಕೊನೆಯದಾಗಿ ಹೇಳಬಯಸುವುದಿಷ್ಟೇ, ಎಚ್ಚರವಾಗಿರೋಣ, ಎದೆಗುಂದದೆ ಈ ಸಂಕಷ್ಟವನ್ನು ಎದುರಿಸೋಣ.''