"ಶೀಘ್ರವೇ ಬೆಳಗಾವಿಯಲ್ಲಿ ಕೊರೊನಾ ಪರೀಕ್ಷೆಗೆ ಪ್ರಯೋಗಾಲಯ"
ಬೆಳಗಾವಿ, ಮಾರ್ಚ್ 21: ಬೆಳಗಾವಿ ಜಿಲ್ಲೆಗೆ ಮಹಾರಾಷ್ಟ್ರ ಹೊಂದಿಕೊಂಡಿರುವ ಕಾರಣ ಬೆಳಗಾವಿಯಲ್ಲಿ ಶೀಘ್ರದಲ್ಲಿಯೇ ಕೊರೊನಾ ಸೋಂಕಿಗೆ ಸಂಬಂಧಿಸಿದ ಗಂಟಲು ದ್ರವ ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಆರಂಭಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸಭೆ ನಡೆಸಿದ ಅವರು, ಕೆಲವು ಮಾಹಿತಿಗಳನ್ನು ಹಂಚಿಕೊಂಡರು. "ಕರ್ನಾಟಕದಲ್ಲಿ ಇವತ್ತಿನವರೆಗೆ 16 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಅದರಲ್ಲಿ ಐವರು ಗುಣಮುಖರಾಗಿದ್ದಾರೆ. ಮೂವರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ. ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ" ಎಂದು ಹೇಳಿದರು.
ಎಷ್ಟೇ positive ಕೇಸ್ ಬಂದ್ರೂ ನಾವು ಎದುರಿಸಲು ಸಿದ್ಧ: ಶ್ರೀರಾಮುಲು
"ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಮತ್ತು ನಾನು ರಾಜ್ಯದ ಆಗು ಹೋಗುಗಳ ಮೇಲೆ ನಿರಂತರ ನಿಗಾ ಇಟ್ಟಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಒಂದೂವರೆ ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಿದ್ದೇವೆ. ಕೊರೊನಾ ಸೋಂಕು ಶಂಕಿತರಿಗೆ ಮನೆಯಲ್ಲಿಯೇ ಉಪಚಾರ ನೀಡಲಾಗುತ್ತಿದೆ. ಇವರ ಮೇಲೆ ನಿಗಾ ಇಡಲು ಹೋಮ್ ಗಾರ್ಡ್ ಗಳನ್ನು ನಿಯೋಜನೆ ಮಾಡಲು ಚಿಂತನೆ ನಡೆಸಿದ್ದೇವೆ. ಜನರು ಕೂಡ ಆರೋಗ್ಯ ಇಲಾಖೆ ನೀಡಿರುವ ಸಲಹೆಯನ್ನು ಪಾಲಿಸಬೇಕು" ಎಂದು ತಿಳಿಸಿದರು.