ಕುಂದಾ, ಕರದಂಟು ಜತೆಗೆ ಬೆಳಗಾವಿ ಅಧಿವೇಶನಕ್ಕೆ ಅಂಟಿಕೊಂಡ ನಂಟು
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸೋಮವಾರದಿದ (ಡಿಸೆಂಬರ್ 10) ಆರಂಭವಾಗಿದೆ. ವಿಧಾನಮಂಡಲದ ಅಧಿವೇಶನದ ಕಲಾಪದಲ್ಲಿ ರಾಜಕೀಯ ಪಕ್ಷದ ನಾಯಕರು ಗಲಾಟೆ -ಗದ್ದಲದಲ್ಲಿ ತೊಡಗಿಕೊಳ್ಳುವ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಇದರ ಜತೆಗೆ ಮತ್ತೊಂದು ಶಾಪಿಂಗ್ ಅಥವಾ ಖರೀದಿ ತಪ್ಪಿಸುವ ಸಾಧ್ಯತೆಯೂ ಕಡಿಮೆ.
ಏನು ಆ ಖರೀದಿ ಅಂತೀರಾ? ಇಂದಿನಿಂದ ಡಿಸೆಂಬರ್ 20ರ ವರೆಗೆ ನಡೆಯಲಿರುವ ಅಧಿವೇಶಕ್ಕೆ ಬಂದವರ ಮುಖ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿ ಸಿಹಿ ತಿನಿಸು ಕುಂದಾ ಹಾಗೂ ಕರದಂಟು ಇದೆ. ಇವೆರಡಕ್ಕೂ ಭಾರೀ ಬೇಡಿಕೆ. ಹೀಗಾಗಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ಸೇರಿದಂತೆ ಸ್ಥಳೀಯ ಕುಂದಾ ವ್ಯಾಪಾರಿಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಸಿಎಂ ವಿರುದ್ಧ ರೈತರ ಸಿಟ್ಟು, ಕಾಂಗ್ರೆಸ್ ನಲ್ಲಿ ಕಚ್ಚಾಟ, ಭರ್ಜರಿ ಊಟ- ಇದು ಅಧಿವೇಶನ
ಮೊಟ್ಟಮೊದಲ ಬಾರಿಗೆ ಅಂದರೆ 2006ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯಿತು. ಆ ಬಳಿಕ ಪ್ರತಿ ಬಾರಿಯೂ ಕುಂದಾ, ಕರದಂಟಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಅಧಿವೇಶನ ನಿಮಿತ್ತ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಬೆಂಬಲಿಗರು ವಾಪಸ್ ಮರಳುವಾಗ ಕುಂದಾ ತೆಗೆದುಕೊಂಡು ಹೋಗುವುದು ಒಂದು ರೀತಿ ಸಂಪ್ರದಾಯದಂತಾಗಿದೆ.
ಬೆಳಗಾವಿಯಲ್ಲಿ 200 ಸಿಹಿ ಖಾದ್ಯ ಮಾರಾಟ ಅಂಗಡಿ
ಇನ್ನು ಈ ಕುರಿತಾಗಿ ಒನ್ ಇಂಡಿಯಾ ಕನ್ನಡದ ಜತೆಗೆ ಮಾತನಾಡಿದ ಕುಂದಾ ತಿನಿಸಿನ ವ್ಯಾಪಾರಿ ಇನಾಂದಾರ್, ಈಗಾಗಲೇ ಬೆಳಗಾವಿಯಲ್ಲಿ 200 ಸಿಹಿ ಖಾದ್ಯ ಮಾರಾಟ ಅಂಗಡಿಗಳಿದೆ. ನಮ್ಮ ಅಂಗಡಿಯಲ್ಲಿಯೇ ಕಳೆದ ವರ್ಷ ಅಧಿವೇಶನದ ವೇಳೆ ಅಂದಾಜು 5,000 ಕೆ.ಜಿ ಕುಂದಾ ಮಾರಾಟವಾಗಿತ್ತು. ಇದರಿಂದ ನಮ್ಮ ವ್ಯಾಪಾರವೂ ಹೆಚ್ಚಾಗಿತ್ತು. ಈ ಸಲ ಅದಕ್ಕಿಂತ ಹೆಚ್ಚು ಮಾರಾಟ ಆಗುವ ನಿರೀಕ್ಷೆ ಇದೆ. ಹೀಗಾಗಿ ತಯಾರಿ ಜೋರು ನಡೆದಿದೆ ಎಂದರು.
ಕ್ಯಾಂಪ್ ಪುರೋಹಿತ ಮಳಿಗೆಯಲ್ಲಿ ದಿನಕ್ಕೆ 300ರಿಂದ 400 ಕೆ.ಜಿ ಕುಂದಾ ಮಾರಾಟ
ಬೆಳಗಾವಿಯ ಪ್ರತಿಷ್ಠಿತ ಕ್ಯಾಂಪ್ ಪುರೋಹಿತ ಸಿಹಿ ಖಾದ್ಯ ಮಾರಾಟ ಮಳಿಗೆಯಲ್ಲಿ ಸಾಮಾನ್ಯ ದಿನಗಳಲ್ಲಿ 300ರಿಂದ 400 ಕೆ.ಜಿ ಕುಂದಾ ಮಾರಾಟವಾದರೆ, ಅಧಿವೇಶನದ ವೇಳೆ ಇದು ಹೆಚ್ಚಾಗುತ್ತದೆ. ಕಳೆದ ಅಧಿವೇಶನದ ವೇಳೆ ನಮ್ಮ ಅಂಗಡಿಯೊಂದರಲ್ಲಿಯೇ 3,000 ಕೆ.ಜಿ ಕುಂದಾ ಮಾರಾಟವಾಗಿತ್ತು. ಒಂದು ಕೆ.ಜಿ ಕುಂದಾಗೆ 340 ರುಪಾಯಿ ಇದೆ ಎಂಬ ಮಾಹಿತಿ ನೀಡಿದ್ದಾರೆ.
10 ದಿನದ ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸಿದ್ಧ
ಆನ್ ಲೈನ್ ನಲ್ಲೂ ಖರೀದಿಗೆ ಸಿಗುತ್ತದೆ
ಅಧಿವೇಶನದ ವೇಳೆಯಲ್ಲಿ ನಗರದ ವಿವಿಧ ಸ್ವೀಟ್ ಮಾರ್ಟ್ ಗಳಲ್ಲಿ ಗೋಕಾಕ ಕರದಂಟು ಮಾರಾಟ ಮಾಡಲಾಗುತ್ತದೆ. ಕೆಲವು ಕಡೆ ಕುಂದಾಗೆ ಹೋಲಿಸಿದರೆ ಕರದಂಟಿಗೆ ದುಬಾರಿ ಬೆಲೆ. ಒಂದು ಕೆ.ಜಿ. ಕರದಂಟಿಗೆ 400ದಿಂದ 700 ರುಪಾಯಿ ತನಕ ದರ ನಿಗದಿ ಮಾಡಲಾಗುತ್ತದೆ. ಅಲ್ಲದೇ ನಮ್ಮ ಮಳಿಗೆ ಕುಂದಾ ಆನ್ ಲೈನ್ ನಲ್ಲಿಯೂ ಸಹ ಲಭ್ಯವಾಗುತ್ತದೆ. ಅಲ್ಲಿಯೂ ಕೂಡ ಆರ್ಡರ್ ಮಾಡಿ ತರಿಸಿಕೊಳ್ಳುತ್ತಾರೆ ಎನ್ನುತ್ತಾರೆ ಕ್ಯಾಂಪ್ ಪುರೋಹಿತ ಸಿಹಿ ಖಾದ್ಯ ಮಾರಾಟದ ವ್ಯಾಪಾರಿಗಳು.
ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಇದ್ದಾರೆ
ಬೆಳಗಾವಿಯನ್ನು ಕುಂದಾ ನಗರಿ ಅಂತಲೇ ಕರೆಯುತ್ತಾರೆ. ಈ ಸಿಹಿ ಖಾದ್ಯ ರಾಜ್ಯದ ನಾನಾ ಭಾಗಗಳಲ್ಲಿ ಸಿಕ್ಕರೂ ಈ ಜಿಲ್ಲೆಯಲ್ಲಿ ಬಲು ವಿಶೇಷ. ಬಹಳ ದಿನ ಇಡಲು ಸಾಧ್ಯವಿಲ್ಲದ ಈ ಖಾದ್ಯವನ್ನು ಖರೀದಿಸಿದ ಕೆಲ ದಿನದಲ್ಲೇ ತಿನ್ನಬೇಕು. ಇನ್ನು ಗೋಕಾಕದ ಕರದಂಟು ಕೂಡ ಅದೇ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಒಟ್ಟಾರೆ ಈ ಅಧಿವೇಶದ ಸಂದರ್ಭದಲ್ಲಿ ಕುಂದಾ-ಕರದಂಟು ಭರ್ಜರಿ ಮಾರಾಟ ಆಗಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.