ಅಥಣಿಯಲ್ಲಿ ಗೆಲುವಿನ ಗೀತೆ ಹಾಡಿದ ಕುಮಟಳ್ಳಿ, ಹೆಬ್ಬಾಳ್ಕರ್ ಗೆ ಮುಖಭಂಗ
ಬೆಳಗಾವಿ, ಡಿಸೆಂಬರ್ 09: ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ನ ಗಜಾನನ ಮಂಗಸೂಳಿ ಅವರನ್ನು 33,678 ಮತಗಳಿಂದ ಸೋಲಿಸಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೂ ಸಹ ಈ ಉಪ ಚುನಾವಣೆ ಅತ್ಯಂತ ಮಹತ್ವದ್ದಾಗಿತ್ತು. ಸವದಿಗೆ ಈ ಫಲಿತಾಂಶದಿಂದ ನಿಟ್ಟುಸಿರು ಬಿಡುವಂತಾಗಿದೆ. ಅವರ ಉಪ ಮುಖ್ಯಮಂತ್ರಿ ಸ್ಥಾನ ಮತ್ತಷ್ಟು ಭದ್ರವಾಗುವ ಲಕ್ಷಣ ಗೋಚರಿಸಿದೆ.
ಅಥಣಿ ಉಪ ಚುನಾವಣೆ: ಗೆದ್ದು ಲಕ್ಷ್ಮೀಗೆ ಟಾಂಗ್ ನೀಡುವರೇ ಕುಮಟಳ್ಳಿ..?
ಮಹೇಶ್ ಕುಮಟಳ್ಳಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಚುನಾಯಿತರಾಗಿದ್ದರು. ಪಕ್ಷಕ್ಕೆ ರಾಜೀನಾಮೆ ನೀಡಿದಾಗ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಉಪ ಚುನಾವಣೆಯಲ್ಲಿ ಅನರ್ಹ ಹಣೆಪಟ್ಟಿಯೊಂದಿಗೆ ಆಖಾಡಕ್ಕಿಳಿದಿದ್ದರು. ಅದರಲ್ಲಿಯೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ದೊಡ್ಡ ಮಟ್ಟದ ಟೀಕೆಯನ್ನು ಎದುರಿಸಿದ್ದರು.
ಹೆಬ್ಬಾಳ್ಕರ್ ಗೆ ತೀವ್ರ ಹಿನ್ನಡೆ
ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿಗೇ ನೀಡಬೇಕೆಂದು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಖುದ್ದು ಸವದಿನೇ ಮೊದಲು ಬೆಂಬಲ ನೀಡಲು ಹಿಂದು ಮುಂದು ನೋಡಿದ್ದರು. ಯಡಿಯೂರಪ್ಪ ಅವರಿಂದ ಖಡಕ್ ಸೂಚನೆ ಪಡೆದ ನಂತರ ಉಪ ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ಭಾಗಿಯಾಗಿ ಮಹೇಶ್ ಕುಮಟಳ್ಳಿಯನ್ನು ಬೆಂಬಲಿಸಿದರು.
ಮತಯಂತ್ರದ ಮೇಲೆ ಲಕ್ಷ್ಮಣ ಸವದಿ ಚಿತ್ರ! ವಿಡಿಯೋ ವೈರಲ್
ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಗಜಾನನ ಮಂಗಸೂಳಿ ಅವರಿಗೆ ಸರಿಯಾದ ಬೆಂಬಲ ರಾಜ್ಯ ನಾಯಕರಿಂದಾಗಲಿ ಮತ್ತು ಕಾರ್ಯಕರ್ತರಿಂದಾಗಲಿ ಸಿಗಲಿಲ್ಲ. ಇದ್ದಿದ್ದರಲ್ಲಿ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕುಮಟಳ್ಳಿ ವಿರುದ್ದ ಪ್ರಚಾರ ಮಾಡಿದ್ದರು. ಅವರು ಏಕವಚನದಲ್ಲಿಯೇ ವೈಯಕ್ತಿಕ ಟೀಕೆ ಮಾಡಿದ್ದರು. ಕಾಂಗ್ರೆಸ್ ನ ಸೋಲು ಹೆಬ್ಬಾಳ್ಕರ್ ಅವರಿಗೆ ತೀವ್ರ ಮುಖಭಂಗ ಉಂಟು ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿ ಪರಾಭವ
ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಮತದಾರರು ಮತ್ತೆ ಕೈ ಹಿಡಿದಿದ್ದಾರೆ. ಗೆಲುವಿನ ನಂತರ ಲಕ್ಷ್ಮಣ್ ಸವದಿ ಮನೆಗೆ ಆಗಮಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರು ಕುಮಟಳ್ಳಿ ಹಾಗೂ ಸವದಿಗೆ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಬಿಜೆಪಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,19,831 ಮತದಾರರಿದ್ದು, ಈ ಉಪ ಚುನಾವಣೆಯಲ್ಲಿ 1,65,687 ಮತದಾನ ಮಾಡಿದ್ದರು. ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಅಭ್ಯರ್ಥಿ 84,699 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 51,021 ಮತಗಳನ್ನು ಪಡೆದಿದ್ದು, 33,678 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ರಮೇಶ್ ಕುಮಾರ್ ಗೆ ತಕ್ಕ ಶಾಸ್ತಿ
ಗೆಲುವಿನ ಸಂತಸ ಹಂಚಿಕೊಂಡ ನೂತನ ಶಾಸಕ ಮಹೇಶ್ ಕುಮಟಳ್ಳಿ, "ಯಡಿಯೂರಪ್ಪ ಹಾಗೂ ಲಕ್ಷ್ಮಣ್ ಸವದಿ ಅವರ ನಾಯಕತ್ವದಲ್ಲಿ ಉಪ ಚುನಾವಣೆ ಎದುರಿಸಿದ್ದು, ಕ್ಷೇತ್ರದ ಮತದಾರರು ನಮಗೆ ಆಶೀರ್ವಾದ ಮಾಡಿದ್ದಾರೆ, ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದರು.
ಅಥಣಿಯ ಎಲ್ಲ ಜನತೆಯನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮನ್ನು ಕಾನೂನು ಬಾಹಿರವಾಗಿ ಅನರ್ಹಗೊಳಿಸಿದ್ದರು. ಜನರೇ ಅವರಿಗೆ ಉತ್ತರ ನೀಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಸಹಕಾರ ಖಾತೆ ನೀಡಿ ಎಂದು ಬೇಡಿಕೆ
ನಂತರ ಇದೇ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡಿದ ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳು, ರಾಜ್ಯದಲ್ಲಿ ಸುಭದ್ರ ಸರ್ಕಾರ ಇರಬೇಕು, ಒಳ್ಳೆಯ ಆಡಳಿತ ನೀಡುವ ಉದ್ದೇಶದಿಂದ ಜನರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಮಹೇಶ್ ಕುಮಟಳ್ಳಿಗೆ ಯಾವುದೇ ಸಚಿವ ಸ್ಥಾನ ಕೊಟ್ಟರೂ ನಿಭಾಯಿಸುತ್ತಾರೆ. ಅವರಿಗೆ ಸಹಕಾರ ಖಾತೆ ನೀಡಿದ್ರೆ ಉತ್ತಮ ಎಂದು ತಿಳಿಸಿದರು. ಯಾರಿಗೆ ಯಾವ ಖಾತೆ ನೀಡಬೆಕೆಂಬುದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟ ವಿಷಯ ಎಂದರು