ತನ್ನನ್ನು ಭಾರೀ ಅಂತರದಿಂದ ಸೋಲಿಸಿದ್ದ ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ
ಬೆಳಗಾವಿ, ನವೆಂಬರ್ 26: ಬೆಳಗಾವಿ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ದೊಡ್ಡ ಟಾಸ್ಕ್ ಕೊಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ತಮ್ಮನ್ನು ಸೋಲಿಸಿದ್ದ ಮಹೇಶ್ ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆಯನ್ನು ಸವದಿಗೆ ನೀಡಲಾಗಿದೆ.
ಕೃಷ್ಣಾ ನದಿಯ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಅಥಣಿ ಕ್ಷೇತ್ರದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದೆ. ಮೇಲ್ನೋಟಕ್ಕೆ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಇದ್ದು, ಜಿದ್ದಿಗೆ ಬಿದ್ದವರಂತೆ ಪ್ರಚಾರ ಕೈಗೊಂಡಿವೆ. ಎರಡೂ ಪಕ್ಷದ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ಉಪಚುನಾವಣೆ, ಡಿಸಿಎಂ ಪರಮಾಪ್ತನೇ ಜೆಡಿಎಸ್ ಅಭ್ಯರ್ಥಿ: ಅಕ್ಷರಶಃ ಬೆಚ್ಚಿಬಿದ್ದ ಬಿಜೆಪಿ
ಸವದಿ ತಮ್ಮ ತನು, ಮನ, ಧನ ಅರ್ಪಿಸಿ ಒಂದು ಕಾಲದ ಚುನಾವಣಾ ವೈರಿಯಾಗಿದ್ದ ಕುಮಟಳ್ಳಿಯನ್ನು ಗೆಲ್ಲಿಸಿಕೊಂಡು ಬರುತ್ತಾರಾ ಅಥವಾ ತಾವೇ ಖುದ್ದಾಗಿ ಸೋಲಿಸುತ್ತಾರಾ ಗೊತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಒಳಹೊಡೆತಗಳು, ತಂತ್ರಗಳು ಯಾವ ರೀತಿಯ ಫಲಿತಾಂಶ ಬರುತ್ತವೆ ಎಂಬುದನ್ನು ಊಹಿಸಲು ಆಗುವುದಿಲ್ಲ. ಸದ್ಯ ಅಥಣಿ ಕ್ಷೇತ್ರದಲ್ಲಿ ಉಪ ಚುನಾವಣೆಯ ಬಿಸಿ ತಾರಕಕ್ಕೇರಿದೆ.
ಈ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವುದು ಮಹೇಶ್ ಕುಮಟಳ್ಳಿಯಾದರೂ, ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಕಟ್ಟಲಾಗಿದೆ. ಇದು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ವಿರುದ್ದ ಸೋಲಿಸಿದ್ದರು, ಬಿಜೆಪಿ ಪಕ್ಷ ಈ ಬಾರಿ ಅವರಿಗೆ ಟಿಕೆಟ್ ನೀಡಿದೆ.
ಅಥಣಿ ಕ್ಷೇತ್ರದಲ್ಲಿ ಇದುವರೆಗೆ ನಡೆದ ಚುನಾವಣೆಗಳಲ್ಲಿ ವೈಯಕ್ತಿಕ ವರ್ಚಸ್ಸು, ಸಕ್ಕರೆ ಲಾಬಿಗಳಲು ಕೆಲಸ ಮಾಡಿವೆ. ಆದರೆ ಪ್ರಸಕ್ತ ಉಪ ಚುನಾವಣೆಯಲ್ಲಿ ಕದನ ಕಣ ಬದಲಾಗಿದೆ. ಪ್ರತಿಷ್ಠೆಯೇ ಪ್ರಮುಖ ಪಾತ್ರ ವಹಿಸಲಿದೆ. ಇಲ್ಲಿ ಲಕ್ಷ್ಮಣ್ ಸವದಿಯ ವೈಯಕ್ತಿಕ ವರ್ಚಸ್ಸು ತುಂಬಾ ಇದೆ. ಇದು ಮಹೇಶ್ ಕುಮಟಳ್ಳಿ ಗೆಲುವಿಗೆ ಸಹಾಯವಾಗುತ್ತಾ ಕಾದು ನೋಡಬೇಕು.
ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆ: ಡಿಸಿಎಂ ಲಕ್ಷ್ಮಣ್ ಸವದಿ ತಲೆದಂಡ?
ಇನ್ನು ಕಾಂಗ್ರೆಸ್ ನಿಂದ ಗಜಾನನ ಮಂಗ್ಸೂಳಿ ಸ್ಪರ್ಧಿಸುತ್ತಿದ್ದು, ಮತದಾರರಿಗೆ ಹೊಸಬರು. ಆದರೆ ಕಳೆದ ಬಾರಿ ಗೆದ್ದುಕೊಂಡಿದ್ದ ಕ್ಷೇತ್ರವನ್ನು ಕೈಬಿಡಬಾರದು ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿಕೊಂಡಿದೆ.
ಮಹೇಶ್ ಕುಮಟಳ್ಳಿ ಅಂದು ರಾಜೀನಾಮೆ ನೀಡಿದ್ದರಿಂದ ಇಂದು ತಾವು ಉಪ ಮುಖ್ಯಮಂತ್ರಿ ಹುದ್ದೆಗೆ ಏರಿದ್ದೇನೆ ಎಂದು ಲಕ್ಷ್ಮಣ್ ಸವದಿ ಹೇಳಿಕೊಂಡಿದ್ದಾರೆ. ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಕದನ ಡಿಸೆಂಬರ್ 05 ರಂದು ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಹೊರಬೀಳಲಿದೆ.