ನೈಸ್ ಕಾರಿಡಾರ್ ವಿರುದ್ಧ ಮತ್ತೆ ಹರಿಹಾಯ್ದ ಕುಮಾರಸ್ವಾಮಿ
ಬೆಳಗಾವಿ, ನವೆಂಬರ್ 22 : ನೈಸ್ ಕಾರಿಡಾರ್ ಮೇಲಿನ ಜೆಡಿಎಸ್ ನ ಹಳೆಯ ದ್ವೇಷ ಇನ್ನೂ ಮುಂದುವರೆದಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಇಂದು(ನವೆಂಬರ್ 22) ಮತ್ತೊಮ್ಮ ನೈಸ್ ಅಕ್ರಮಗಳ ಕುರಿತು ಮಾತನಾಡಿದರು.
ನೈಸ್ ಅಕ್ರಮ ಸಮಿತಿ ವರದಿ ಮೇಲಿನ ಚರ್ಚೆ ಆರಂಭವಾಗುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಅವರು "ನೈಸ್ ಅಕ್ರಮಗಳ ಕುರಿತು ಕಳೆದ ಅಧಿವೇಶನದಲ್ಲಿಯೇ ವರದಿ ಮಂಡನೆಯಾಗಿದೆ ಆದರೆ ಸರ್ಕಾರ ವರದಿಯನ್ನು ಜಾರಿ ಮಾಡದೆ ಕತ್ತಲೆ ಕೋಣೆಯಲ್ಲಿಟ್ಟಿದೆ' ಎಂದು ಸರ್ಕಾರದ ಮೇಲೆ ಹರಿಹಾಯ್ದರು.
'ನೈಸ್ ಯೋಜನೆ ಹೆಸರಲ್ಲಿ ಬಡ ರೈತರಿಗೆ ಅನ್ಯಾಯ ಮಾಡಲಾಗಿದೆ, ಅದಷ್ಟೆ ಅಲ್ಲದೆ ಹಲವು ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಮಾಡಲಾಗಿದೆ ಅದೆಲ್ಲಾ ಸರ್ಕಾರಕ್ಕೂ ಗೊತ್ತಿದೆ ಆದರೂ ಅದರ ಮೇಲೆ ಕ್ರಮ ಏಕೆ ಜರುಗಿಸಿಲ್ಲ' ಎಂದು ಕುಮಾರಸ್ವಾಮಿ ಗುಡುಗಿದರು.
'ನೈಸ್ ಸಂಸ್ಥೆಯ ಪರ ಕೆಲವು ಪ್ರಮುಖ ಅಧಿಕಾರಿಗಳು ಕೆಲಸ ಮಾಡಿದ್ದಾರೆ, ನೈಸ್ ಗೆ ಅನುಕೂಲವಾಗುವಂತೆ ಅಧಿಕಾರಿಗಳು ದಾಖಲೆ ತಿದ್ದಿದ್ದಾರೆ, ಬಿಎಮ್ಐಸಿ ಸಂಸ್ಥೆಯಲ್ಲಿ ನಮ್ಮ ರಾಜ್ಯದ ಕೆಲವು ನಿವೃತ್ತ ಅಧಿಕಾರಿಗಳು ನಿರ್ದೇಶಕರಾಗಿದ್ದಾರೆ ಅವರೆಲ್ಲಾ ಅಧಿಕಾರದಲ್ಲಿದ್ದಾಗ ನೈಸ್ ಅಕ್ರಮಕ್ಕೆ ಸಹಾಯ ಮಾಡಿದ್ದಾರೆ ಅವರ ಮೇಲೆಯೂ ಕ್ರಮ ಜರುಗಿಸಿಲ್ಲ' ಎಂದು ಅವರು ಪ್ರಶ್ನೆ ಮಾಡಿದರು.
ನೈಸ್ ಕಾರಿಡಾರ್ ಯೋಜನೆ ಪ್ರಾರಂಭವಾದಾಗಿನಿಂದಲೂ ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಅದನ್ನು ವಿರೋಧಿಸುತ್ತಲೆ ಬಂದಿದ್ದಾರೆ. ಈ ಕುರಿತು ಹಲವು ಪ್ರತಿಭಟನೆಗಳನ್ನೂ ಜೆಡಿಎಸ್ ಮಾಡಿತ್ತು.