ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ನೀಡಲ್ಲ: ಸಚಿವ ಕೆಎಸ್ ಈಶ್ವರಪ್ಪ
ಬೆಳಗಾವಿ, ನವೆಂಬರ್ 30: ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ಇಲ್ಲ ಎಂದು ಹೇಳುವ ಮೂಲಕ ಸಚಿವ ಕೆಎಸ್ ಈಶ್ವರಪ್ಪ ಮತ್ತೊಂದು ವಿವಾದವನ್ನು ತಂದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬೆಳಗಾವಿಯಲ್ಲಿ ಕುರುಬರಿಗೋ, ಲಿಂಗಾಯತರಿಗೋ, ಒಕ್ಕಲಿಗರಿಗೋ, ಬ್ರಾಹ್ಮಣರಿಗೋ ಟಿಕೆಟ್ ಕೊಡುತ್ತೇವೆ. ಆದರೆ ಯಾವ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ ಎಂದಿದ್ದಾರೆ.
ಬಿಜೆಪಿ ಮೇಲೆ ಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ; ಈಶ್ವರಪ್ಪ
ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಸಾವನ್ನಪ್ಪಿದ್ದರಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು? ಎಂಬ ಚರ್ಚೆ ಶುರುವಾಗಿದೆ.
ಇಲ್ಲಿಂದ ಯಾವ ಮುಸ್ಲಿಂ ಅಭ್ಯರ್ಥಿಯೂ ಬಿಜೆಪಿ ಟಿಕೆಟ್ ಕೇಳಿಲ್ಲ. ಆದರೂ ಕೆ.ಎಸ್. ಈಶ್ವರಪ್ಪ ಬೆಳಗಾವಿ ಹಿಂದುತ್ವದ ಕೇಂದ್ರವಾಗಿದೆ. ಆದುದರಿಂದ ಬೆಳಗಾವಿ ಲೋಕಸಭೆ ಟಿಕೆಟ್ ನ್ನು ನಾವು ಮುಸ್ಲಿಮರಿಗಂತೂ ನೀಡಲ್ಲ, ಹಿಂದೂಗಳಿಗೇ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಈ ಮಧ್ಯೆ ಬೆಳಗಾವಿ ಲೋಕಸಭಾ ಟಿಕೆಟ್ ಅನ್ನು ಕುರುಬ ಸಮುದಾಯಕ್ಕೆ ಕೊಡಬೇಕೆನ್ನುವ ಚರ್ಚೆಗಳು ಕೂಡ ನಡೆಯುತ್ತಿವೆ. ಇದರ ಬಗ್ಗೆ ಮಾತನಾಡಿದ ಈಶ್ವರಪ್ಪ, ಇಲ್ಲಿ ಕುರುಬ, ಒಕ್ಕಲಿಗ, ಲಿಂಗಾಯತ ಅಥವಾ ಬ್ರಾಹ್ಮಣ ಎಂಬ ಪ್ರಶ್ನೆ ಬರುವುದಿಲ್ಲ.
ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕುರುಬರಿಗೆ ಟಿಕೆಟ್ ಕೊಟ್ಟಿದೆ. ಆದರೆ ಅವರು ಗೆದ್ದಿಲ್ಲ. ಠೇವಣಿ ಕಳೆದುಕೊಳ್ಳುವವರಿಗೆ ಟಿಕೆಟ್ ಕೊಡಬೇಕೆ? ಎಂದು ಪ್ರಶ್ನಿಸಿದರು. ಆ ಮೂಲಕ ಈಶ್ವರಪ್ಪ ಕುರುಬರಿಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಠೇವಣಿ ಕೂಡ ಸಿಗುವುದಿಲ್ಲ ಎಂದು ಹೇಳಿದರು.
ಒಂದು ಕಡೆ ಕುರುಬ ಸಮುದಾಯವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಿ ಎಂದು ಹೋರಾಟ ನಡೆಸುವ ಕೆ.ಎಸ್. ಈಶ್ವರಪ್ಪ ಇನ್ನೊಂದೆಡೆ ಕುರುಬರಿಗೆ ಟಿಕೆಟ್ ಬೇಡ' ಎಂದು ಹೇಳುತ್ತಿದ್ದಾರೆ.
ಮುಸ್ಲಿಂರವರಿಗೆ ಟಿಕೆಟ್ ನೀಡುವುದಿಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ "ಮುಸ್ಲಿಂರಿಗೆ ಟಿಕೆಟ್ ನೀಡದೆ ಇರೋದು ಬಿಜೆಪಿ ಪಕ್ಷದ ಸಿದ್ಧಾಂತ. ಸಂವಿಧಾನ ಸುಟ್ಟು ಬಿಡ್ಲಿ ಸಂವಿಧಾನ ಸುಡಲಿಕ್ಕೆ ಬಿಜೆಪಿ ಬಂದಿರೋದು. ಇಲ್ಲದಿದ್ದರೆ ಈಶ್ವರಪ್ಪ ಒಂದು ಸಾರಿ ಸಂವಿಧಾನವನ್ನು ಓದಿಬಿಡಲಿ" ಎಂದು ತಿರುಗೇಟು ನೀಡಿದ್ದಾರೆ.