"ನೆಹರು ದೂಷಿಸುವ ಬಿಜೆಪಿಯವರು, ಒಂದು 'ಡ್ಯಾಂ'ನ್ನಾದರೂ ನಿರ್ಮಿಸಿದ್ದಾರಾ?"
ಬೆಳಗಾವಿ, ಡಿಸೆಂಬರ್ 28: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಕೂಗಾಡುವ ಬಿಜೆಪಿಯವರೇ ಅತೀ ಹೆಚ್ಚು ಬೀಫ್(ಮಾಂಸ)ವನ್ನು ವಿದೇಶಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹಿಲ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಗೋ ಹತ್ಯೆ ನಿಷೇಧ ಕಾಯ್ದೆ ಬಿಲ್ ಪಾಸ್ ಮಾಡಿದ್ದಾರೆ. ಆದರೆ ಇದಕ್ಕೂ ಮೊದಲೇ ಕಾಂಗ್ರೆಸ್ ಈ ಬಿಲ್ ಪಾಸ್ ಮಾಡಿದೆ ಎಂದರು.
ರಾಜ್ಯದಲ್ಲಿರುವ ಮೂರು ಡಿಸಿಎಂ ಹುದ್ದೆಗಳು ಅಸಂವಿಧಾನಿಕ!
ಬಿಜೆಪಿಯವರು ಕೆಲವು ತಿದ್ದುಪಡಿ ಮಾಡಿ 13 ವರ್ಷದ ಗೋವುಗಳ ಹತ್ಯೆಗೆ ಅವಕಾಶ ನೀಡಿದ್ದಾರೆ. ನಿಜವಾಗಿಯೂ ಕಾಯ್ದೆ ಜಾರಿಗೆ ತರುವ ಉದ್ದೇಶವಿದ್ದಿದ್ದರೆ ಸಂಪೂರ್ಣ ಗೋ ಹತ್ಯೆಯನ್ನು ನಿಷೇಧ ಮಾಡಬೇಕಿತ್ತು ಎಂದು ಹೇಳಿದರು.
ಬಿಜೆಪಿಯವರು ಮಾಜಿ ಪ್ರಧಾನಿ ನೆಹರು ಬಗ್ಗೆ ಹೆಚ್ಚು ಟೀಕೆ ಮಾಡುತ್ತಾರೆ. ಎಲ್ಲದಕ್ಕೂ ನೆಹರು ಅವರನ್ನೇ ದೋಷಿಸುತ್ತಾರೆ. ನಿಜಾಂಶ ಎಂದರೆ ದೇಶ ಇಷ್ಟು ಪ್ರಗತಿ ಹೊಂದಲು ನೆಹರು ಅವರೇ ಕಾರಣ. ಅವರ ಪರಿಕಲ್ಪನೆಯಿಂದಲೇ ದೇಶ ಅಭಿವೃದ್ದಿ ಹೊಂದಿದೆ. ಖಾಸಗಿ ಸಂಸ್ಥೆಗಳನ್ನು, ನೀರಾವರಿ ಯೋಜನೆ, ಡ್ಯಾಂ ನಿರ್ಮಾಣ, ಮೆಡಿಕಲ್ ಕಾಲೇಜು, ಐಐಟಿ, ವಿಮಾನ ನಿಲ್ದಾಣ ಇವೆಲ್ಲವೂ ನೆಹರು ಅವರ ಕೊಡುಗೆಯಾಗಿವೆ ಎಂದರು.
ಬಿಜೆಪಿಯವರು ಒಂದೇ ಒಂದು ಡ್ಯಾಂ ಕಟ್ಟಿದ್ದಾರಾ? ಎಂದು ಪ್ರಶ್ನಿಸಿದ ಶಾಸಕ ಸತೀಶ ಜಾರಕಿಹೊಳಿ, ಬಿಜೆಪಿಯವರದ್ದೇನಿದ್ದರೂ ಸರ್ಜಿಕಲ್ ಸ್ಟ್ರೈಕ್, ಗೋ ಹತ್ಯೆ ನಿಷೇಧ, ಲವ್ ಜಿಹಾದ್ ಇಷ್ಟೇ ಇವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ದೇಶಭಕ್ತಿ ಪ್ರತಿಯೊಬ್ಬರಿಗೂ ಹುಟ್ಟಿನಿಂದಲೇ ಬಂದಿರುತ್ತದೇ ಅದನ್ನು ಯಾರಿಂದಲೂ ಕಲಿಯಬೇಕಿಲ್ಲ. ದೇಶಭಕ್ತಿ ಹೆಸರಲ್ಲಿ ಬಿಜೆಪಿಯವರು ಜನತೆಯನ್ನು ಇಬ್ಭಾಗ ಮಾಡುತ್ತಿದ್ದಾರೆ. ಸುಳ್ಳು ಹೇಳಿ, ಇತಿಹಾಸ ತಿರುಚಿ ಜನರಿಗೆ ಮರಳು ಮಾಡುತ್ತಿದ್ದಾರೆ. ಬಡವರನ್ನು ಮತ್ತಷ್ಟು ಬಡವರನ್ನಾಗಿಸುವುದೇ ಅವರ ಹಿಡನ್ ಅಜೆಂಡಾ ಆಗಿದೆ ಎಂದು ಕಿಡಿಕಾರಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವು ಹೆಚ್ಚು ಗೌರವಿಸುತ್ತೇವೆ. ಎಸ್ಸಿ-ಎಸ್ಟಿ ಮಾತ್ರವಲ್ಲದೇ ಇಡೀ ದೇಶದ ಜನತೆಗೆ ಸಮಾನತೆಯನ್ನು ನೀಡಿದ್ದಾರೆ. ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡಿದ್ದಾರೆ. ತುಳಿತಕ್ಕೊಳಗಾದವರಿಗೆ ನ್ಯಾಯ ಕಲ್ಪಿಸುವುದೇ ಬುದ್ಧ, ಬಸವ, ಅಂಬೇಡ್ಕರ್ ಮೂವರು ಮಹಾನ್ ನಾಯಕರ ಆಶಯವಾಗಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.