ಬಿಜೆಪಿ ಪರ ಪ್ರಚಾರ: ಪ್ರಕಾಶ್ ಹುಕ್ಕೇರಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ಆಕ್ರೋಶ
ಬೆಳಗಾವಿ, ಅಕ್ಟೋಬರ್ 27: ಮಾಜಿ ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂಬ ಪ್ರಕಾಶ್ ಹುಕ್ಕೇರಿ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ಹುಕ್ಕೇರಿ ಅವರ ಹೇಳಿಕೆ ಅಚ್ಚರಿ ತಂದಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದು, ಬೇರೆ ಪಕ್ಷದ ಪರ ಹೇಳಿಕೆ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಪ್ರಕಾಶ್ ಹುಕ್ಕೇರಿ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ ಎಂದು ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.
ಶಿವಾಜಿ ಪುತ್ಥಳಿ ಸ್ಥಾಪನೆಗೆ ಶಾಸಕ ಸತೀಶ್ ಜಾರಕಿಹೊಳಿ ಭೂಮಿ ಪೂಜೆ
ಪ್ರಕಾಶ್ ಹುಕ್ಕೇರಿಯವರು ಕಾಂಗ್ರೆಸ್ನಲ್ಲಿ ಎಲ್ಲಾ ಹುದ್ದೆಗಳನ್ನು ಎಂಜಾಯ್ ಮಾಡಿದ್ದಾರೆ. ಜಿ.ಪಂ ಸದಸ್ಯನಿಂದ ಹಿಡಿದು, ಎಂಎಲ್ಎ, ಎಂಪಿ, ಎಂಎಲ್ಸಿ, ಮಂತ್ರಿ ಎಲ್ಲಾ ಆಗಿದ್ದಾರೆ. ತಕ್ಷಣ ಏನೂ ಆಗಲ್ಲ ಕಾದು ನೋಡೋಣವೆಂದರು.
ಎಲ್ಲಾ ಪಕ್ಷಗಳನ್ನು ಮುಸುಕಿನ ಗುದ್ದಾಟ ಇದೆ. ಬಿಜೆಪಿಯಲ್ಲಿ ಏನು ಸರಿ ಇದೆ? ಅಲ್ಲಿಯೂ ನಮಗಿಂತ ಹೆಚ್ಚು ಮುಸುಕಿನ ಗುದ್ದಾಟವಿದೆ. ಒಂದು ವಿಷಯ ಪರಿಹಾರ ಮಾಡಿದರೆ, ಮತ್ತೊಂದು ವಿಷಯ ಬರ್ತಾನೆ ಇರುತ್ತೆ, ಅದಕ್ಕೆ ರಾಜಕೀಯ ಅನ್ನೋದು. ಹೈಕಮಾಂಡ್ ಸಹ ಪ್ರಕಾಶ್ ಹುಕ್ಕೇರಿ ಹೇಳಿಕೆಯನ್ನು ಗಮನಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಸೌಮ್ಯಾರೆಡ್ಡಿ, ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಅಂತಾ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯಾರು ಏನೇ ಹೇಳಿದರೂ ಅದಕ್ಕೆ ಏನೂ ವ್ಯಾಲ್ಯೂ ಇಲ್ಲ, 113 ಶಾಸಕರು ಆಯ್ಕೆಯಾಗಿ ಅವರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ನಿರ್ಧರಿಸುವುದು ನಮ್ಮಲ್ಲಿರುವ ವ್ಯವಸ್ಥೆ ಎಂದರು.
ಯಾರಿದ್ದರೂ ಪಕ್ಷ ಸಂಘಟನೆ ಮಾಡಬೇಕು, ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು. ಅದೊಂದೇ ನಮ್ಮ ಹತ್ತಿರ ಇರುವ ಆಪ್ಷನ್, ಸಿಎಂ ಆಪ್ಷನ್ ಪ್ರಶ್ನೆ ಇಲ್ಲ ಎಂದು ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.