"ಸಾಮರ್ಥ್ಯ ಹಾಗೂ ಜನಪ್ರಿಯತೆ ಆಧಾರದ ಮೇಲೆ ಉಪ ಚುನಾವಣೆ ಟಿಕೆಟ್"
ಬೆಳಗಾವಿ, ಅಕ್ಟೋಬರ್ 1: ಉಪ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹಾಗೂ ಜನಪ್ರಿಯತೆ ಆಧಾರದ ಮೇಲೆ ಟಿಕೆಟ್ ಹಂಚಿಕೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ಇನ್ನೂ ನಡೆದಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಗೆಲ್ಲುವವರಿಗೆ ಮಾತ್ರ ಪಕ್ಷ ಮನ್ನಣೆ ನೀಡಲಿದೆ. ಇಲ್ಲಿ ಜಾತಿ, ಗುಂಪಿನ ಪ್ರಶ್ನೆ ಇಲ್ಲ ಎಂದು ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಈ ಬಾರಿ ಒಂದು ದಿನ ಮಾತ್ರ ಕಿತ್ತೂರು ಉತ್ಸವ
ಉಪ ಚುನಾವಣೆ ಚುನಾವಣೆ ಘೋಷಣೆ ಆದಾಗ ಅಭ್ಯರ್ಥಿ ಆಯ್ಕೆ ವಿಚಾರ ಚರ್ಚೆಗೆ ಬರುತ್ತದೆ. ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಇನ್ನೂ ಯಾರು ಆಕಾಂಕ್ಷಿಗಳು ಮುಂದೆ ಬಂದಿಲ್ಲ. ಪಕ್ಷದಲ್ಲಿ ಉಪ ಚುನಾವಣೆ ಚರ್ಚೆಯೇ ಆರಂಭವಾಗಿಲ್ಲ. ಮುಂದಿನ 15 ದಿನದಲ್ಲಿ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ತುಮಕೂರು ಜಿಲ್ಲೆಯ ಶಿರಾ, ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಸರ್ವ ಪ್ರಯತ್ನ ಮಾಡುತ್ತಿದೆ. ಪಕ್ಷದ ಆಂತರಿಕ ಸಮಸ್ಯೆಯಿಂದ ಶಿರಾದಲ್ಲಿ ಸೋಲು ಅನುಭವಿಸುವಂತಾಯಿತು. ಈ ಸಲ ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ಬೆಳಗಾವಿ ಪ್ರವಾಹ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಿಲ್ಲ. ಸರಕಾರ ಈ ಸಂಬಂಧ ಸರಿಯಾದ ಉತ್ತರ ಕೊಟ್ಟಿಲ್ಲ. ಜನರ ಮುಂದೆ ಈ ವಿಷಯವನ್ನು ಹೇಳುತ್ತೇನೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿರುವ ಕಾಂಗ್ರೆಸ್ ಭವನ ಹಾಗೂ ಸೇವಾದಳ ತರಬೇತಿ ಕೇಂದ್ರ ನಾಳೆ ಉದ್ಘಾಟನೆಗೊಳ್ಳಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಬೆಳಗಾವಿಗೆ ಆಗಮಿಸಿ ಉದ್ಘಾಟನೆಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.