ಕೋಡಿಶ್ರೀಗಳ ವರ್ಷದ ಮೊದಲ ಭವಿಷ್ಯ: ಲೋಕಕ್ಕೆ ಕಾದಿದೆ ಕಂಟಕ
ಬೆಳಗಾವಿ, ಜ 28: ಅರಸೀಕೆರೆ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು 2015ರ ವರ್ಷದಲ್ಲಿ ಮೊದಲ ಬಾರಿ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಶ್ರೀಗಳು, ಮುಂಬರುವ ದಿನಗಳಲ್ಲಿ ಲೋಕ ತುಂಬಾ ಕಂಟಕವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. (2014ರ ಕೋಡಿಶ್ರೀಗಳ ಭವಿಷ್ಯದ ಸತ್ಯಾಸತ್ಯತೆ)
ಸಮಾಜ ಇಂದು ಹಣದ ಅಹಂಕಾರದಿಂದ ಕೂಡಿದೆ. ಯುದ್ದ, ಕಲಹ, ಕಾಯಿಲೆಗಳು ಹೆಚ್ಚಾಗಿ ಕಂಡುಬರಲಿವೆ. ಅತ್ಯಾಚಾರ ಮತ್ತು ಸುಲಿಗೆಗಳು ಸಮಾಜವನ್ನು ಇನ್ನಿಲ್ಲದಂತೆ ಕಾಡಲಿದೆ ಎಂದು ಕಾಲಜ್ಞಾನಿ ಕೋಡಿಶ್ರೀಗಳು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಹಿರೇಬಾಗೆವಾಡಿಯ ಗಣಿಕೊಪ್ಪ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಏಕದಶ ಕೋಟಿ ಶಿವ ಷಡಾಕ್ಷರ ಜಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳು, ಸಮಾಜದಲ್ಲಿ ಶಾಂತಿ ನೆಲೆಸ ಬೇಕಾದರೆ ದೇವರ ಸ್ಮರಣೆ ಮುಖ್ಯ ಎಂದು ಜನತೆಗೆ ಸಂದೇಶ ನೀಡಿದ್ದಾರೆ.
ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ಯುವ ಸಮುದಾಯಕ್ಕೆ ದೇವರ ಮೇಲೆ ನಂಬಿಕೆ ಕಮ್ಮಿಯಾಗುತ್ತಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಹಿಂಸಾತ್ಮಕ ಕೃತ್ಯಗಳು ಹೆಚ್ಚಾಗಲಿವೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. (2015ರ ರಾಶಿ ಭವಿಷ್ಯ)
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಯುವಕರು ಹಳ್ಳಿಯಲ್ಲಿ ನೆಲೆಸಬೇಕು. ಕೃಷಿ ಮೂಲಕ ಜೀವನ ಸಾಗಿಸಬೇಕು. ರೈತರೇ ಈ ದೇಶದ ಬೆನ್ನೆಲುಬು. ಹಣದ ಆಸೆಗೆ ಬಿದ್ದು ಸಮಾಜ ವಿರೋಧಿ ಕೆಲಸಕ್ಕೆ ಕೈಹಾಕಬಾರದೆಂದು ಯುವಕರಲ್ಲಿ ಮನವಿ ಮಾಡಿದ್ದಾರೆ.
ನಾನು ಭವಿಷ್ಯ ರೂಪಿಸುವವನೇ ಹೊರತು, ಭವಿಷ್ಯ ಹೇಳುವವನಲ್ಲ. ಸತ್ಯ ಎಂದಿಗೂ ಅಪ್ರಿಯ ಮತ್ತು ಕಹಿಯಿಂದ ಕೂಡಿರುತ್ತದೆ. ಹೀಗಾಗಿ ಸತ್ಯವನ್ನು ನುಡಿದರೆ ತೊಂದರೆಯಾಗುತ್ತದೆ, ನಾನು ಇನ್ನು ಮುಂದೆ ಭವಿಷ್ಯವನ್ನು ನುಡಿಯುವುದಿಲ್ಲ ಎಂದು ಕೋಡಿಮಠದ ಶ್ರೀಗಳು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.