ಶಾಸಕಿ ಅಂಜಲಿ ನಿಂಬಾಳ್ಕರ್ ಬಿಜೆಪಿ ಸೇರ್ಪಡೆ ಪ್ರಸ್ತಾವಕ್ಕೆ ಭಾರೀ ವಿರೋಧ
ಬೆಳಗಾವಿ, ಜುಲೈ 9: ಕಾಂಗ್ರೆಸ್ ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆ ಆಗಬಹುದು ಎಂಬ ಪ್ರಸ್ತಾವ ಇರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಬಿಜೆಪಿಯ ಸ್ಥಳೀಯ ಘಟಕದಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಖಾನಾಪುರ ತಾಲೂಕು ಘಟಕದ ಅಧ್ಯಕ್ಷ ವಿಠ್ಠಲ ಪಾಟೀಲ್ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ, ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಬಿಜೆಪಿಗೆ, ಸಚಿವ ಸ್ಥಾನದ ಆಫರ್?
ಪ್ರತಿಭಟನಾರ್ಥವಾಗಿ ಸದಸ್ಯತ್ವ ಅಭಿಯಾನವನ್ನು ಅಮಾನತು ಮಾಡಿದ್ದೆವೆ ಎಂದು ವಿಠ್ಠಲ ಪಾಟೀಲ್ ಹೇಳಿದ್ದಾರೆ. "ಅಂಜಲಿ ನಿಂಬಾಳ್ಕರ್ ತಮ್ಮ ಚುನಾವಣೆ ಪ್ರಚಾರದ ಉದ್ದಕ್ಕೂ ಬಿಜೆಪಿ ಹಾಗೂ ಪಕ್ಷದ ನಾಯಕರನ್ನು ನಿಂದಿಸಿದರು, ಅವಮಾನಿಸಿದರು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಆಕೆಯ ಬೆಂಬಲಿಗರು ವಾಮ ಮಾರ್ಗ ಅನುಸರಿಸಿದರು. ಅದೆಲ್ಲಕ್ಕೂ ಮುಖ್ಯವಾಗಿ ಆಕೆ ಮೂಲತಃ ಬಿಜೆಪಿ ಅಥವಾ ಸಂಘ ಪರಿವಾರದ ನಾಯಕಿಯಲ್ಲ. ಅವರು ಹೇಗೆ ನಮ್ಮ ಪಕ್ಷ ಸೇರಲು ಸಾಧ್ಯ?" ಎಂದಿದ್ದಾರೆ.
ಅಂಜಲಿ ನಿಂಬಾಳ್ಕರ್ ಆಅಯ್ಕೆಯಾದಾಗಿನಿಂದ ಖಾನಾಪುರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ಆಗುವವರೆಗೆ ಪಕ್ಷದ ಯಾವುದೇ ಕೆಲಸವನ್ನು ತಾಲೂಕು ಘಟಕದ ಕಾರ್ಯಕರ್ತರು ಕೈಗೆತ್ತಿಕೊಳ್ಳುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.