ಜಲವಿವಾದ: ರೈತರ ಕೇಸುಗಳ ವಾಪಸ್ ಗೆ ಪರಂ ಭರವಸೆ
ಬೆಳಗಾವಿ, ನವೆಂಬರ್ 22: ಮಹದಾಯಿ ಮತ್ತು ಕಾವೇರಿ ಗಲಾಟೆಯಲ್ಲಿ ರೈತರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯತು. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಕೇಸ್ ಗಳನ್ನು ವಾಪಸ್ ಪಡೆಯುವುದಾಗಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜು ಅವರು ರೈತರ ಮೇಲೆ ದಾಖಲಾಗಿರುವ ಪ್ರಕರಣಗಳ ಮಾಹಿತಿ ಕೇಳಿದರು. ಮಹದಾಯಿ ನದಿ ನೀರಿನ ಚಳವಳಿಯಲ್ಲಿ ಒಟ್ಟು 82 ಪ್ರಕರಣಗಳು ದಾಖಲಾಗಿವೆ. ಕಾವೇರಿ ನದಿ ನೀರಿನ ಚಳವಳಿಯಲ್ಲಿ 44 ಪ್ರಕರಣಗಳು ದಾಖಲಾಗಿದ್ದು, ಅಮಾಯಕರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ತಿಳಿಸಿದರು.['ಮಹಾದಾಯಿ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಿರಿ']
ಯಾವ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದಕ್ಕೆ ಹಿರಿಯ ಅಧಿಕಾರಿಗಳಾದ ಕಮಲ್ ಪಂಥ್ ಮತ್ತು ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಕೇಳಿದ್ದೆವು, ಸಮಿತಿ ವರದಿ ನೀಡಿದೆ. ಅದನ್ನು ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ನಂತರ ಸಂಪುಟದ ಮುಂದೆ ಮಂಡಿಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಚಳವಳಿ ಹೆಸರಿನಲ್ಲಿ 12 ಕಚೇರಿಗಳನ್ನು ಸುಟ್ಟು ಹಾಕಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದನ್ನು ಮಾಡಿದವರು ಕೇವಲ ರೈತರಲ್ಲ. ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆದಿದೆ ಎಂದು ಸರ್ಕಾರದ ಗಮನಕ್ಕೆ ಬಂದಿದೆ. ಅಮಾಯಕ ರೈತರನ್ನು ಬಿಡುಗಡೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುಲಾಗುತ್ತಿದೆ ಎಂದರು.[ಕಾವೇರಿ ಸಮಸ್ಯೆ ಕಾವೇರಿಯಿಂದಲೇ ಪರಿಹಾರ ಕಾಣಬೇಕು]
ಪ್ರಶ್ನೆ ಕೇಳಿದ ಶಾಸಕ ರಾಜು ಅವರು, ರೈತರ ಮೇಲೆ ಇತರೆ ಸೆಕ್ಷನ್ ಜತೆ ಜೀವಾವಧಿ ಶಿಕ್ಷೆಯಾಗುವಂತಹ ಡಕಾಯಿತಿ ಆರೋಪದ ಸೆಕ್ಷನ್ 397ನ್ನೂ ಹಾಕಲಾಗಿದೆ. ರೈತರೇನು ಡಕಾಯಿತರೇ. ಮೊದಲು ಈ ಸೆಕ್ಷನ್ ಹಿಂಪಡೆಯಿರಿ ಎಂದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು, ಪೊಲೀಸರು 80 ವರ್ಷದ ವೃದ್ಧೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರುಗಳು ನಿಮಗೇನು ತೊಂದರೆ ನೀಡಿದ್ದರು ಎಂದರು. ಸರ್ಕಾರಕ್ಕೆ ರೈತರ ಮೇಲೆ ಪ್ರಕರಣ ಪಡೆಯುವ ಇಚ್ಚಾಶಕ್ತಿ ಇಲ್ಲ ಎಂದರು.
ಹಿರಿಯ ಪೊಲೀಸ್ ಅಧಿಕಾರಿಗಳ ಸಮಿತಿ ನೀಡಿರುವ ವರದಿಯನ್ನು ಈ ಅಧಿವೇಶನದಲ್ಲಿ ಮಂಡಿಸಿ. ನಿಮಗೆ ರಾಜಕೀಯ ಇಚ್ಚಾಶಕ್ತಿ ಇದ್ದರೆ ಕೂಡಲೇ ಪ್ರಕರಣಗಳನ್ನು ಹಿಂಪಡೆಯಿರಿ ಎಂದು ಆಗ್ರಹಿಸಿದರು. ರೈತರ ಕಾಳಜಿಗೆ ಸರ್ಕಾರದ ಯೋಜನೆಗಳೇ ಸಾಕ್ಷಿ, ಪ್ರಕರಣಗಳನ್ನು ಹಿಂಪಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಡೈರೆಕ್ಟರ್ ಆಫ್ ಪ್ರಾಸ್ಯೂಕ್ಯೂಷನ್ ವರದಿ ಬಂದ ನಂತರ ನಿರ್ಧರಿಸುವುದಾಗಿ ಪರಮೇಶ್ವರ್ ತಿಳಿಸಿದರು.