ಝಂಜರವಾಡದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಕಾವೇರಿ ಕಣ್ಣು ತೆರೆಯಲಿಲ್ಲ
ಅಥಣಿ (ಬೆಳಗಾವಿ), ಏಪ್ರಿಲ್ 24 : ಕೋಟ್ಯಂತರ ಜನರ ಪ್ರಾರ್ಥನೆಗೆ ಕೊನೆಗೆ ಫಲ ಸಿಗಲಿಲ್ಲ. ಕೊಳವೆಬಾವಿಗೆ ಬಿದ್ದಿದ್ದ ಕಾವೇರಿ ಬದುಕಿ ಬರಲಿಲ್ಲ. ಆಕೆಯ ತಾಯಿಯಲ್ಲಿ ಕಣ್ಣೀರು ಬಾಕಿಯಿಲ್ಲದಂತಾಗಿದೆ.
ನಮ್ಮ ಮನೆ ಹುಡುಗಿ ಬದುಕಿ ಬರುತ್ತಾಳೆ ಎಂದು ಕಾದಿದ್ದ ಆಕೆಯ ಸಂಬಂಧಿಕರ ರೋದನಕ್ಕೆ ಎಂಥವರ ಮನಸ್ಸು ಕರಗುವಂತಿತ್ತು. ಎರಡು ಕೈಯಲ್ಲಿ, ಮುಚ್ಚಿದ್ದ ಬಟ್ಟೆಯಲ್ಲಿ ಆ ಹೆಣ್ಣುಮಗುವಿನ ಶವವನ್ನು ತರುವಾಗ ಹೃದಯಕ್ಕೆ ಇರಿದಂಥ ನೋವು.
ತನ್ನಿಂತಾನೆ 'ಛೇ' ಎಂದು ಹೊರಬರುತ್ತಿದ್ದ ಅಸಹಾಯಕತೆ, ಆಕ್ರೋಶ..ಇಷ್ಟೇ ಉಳಿದಿದ್ದು ಝಂಜರವಾಡದ ಜಮೀನಿನ ಸುತ್ತ. ಕೊಳವೆ ಬಾವಿಗೆ ಬಿದ್ದಿದ್ದ 6 ವರ್ಷದ ಕಾವೇರಿಯನ್ನು ರಕ್ಷಣಾ ಸಿಬ್ಬಂದಿ ಸತತ 54 ಗಂಟೆಗಳ ಕಾರ್ಯಾಚರಣೆ ನಂತರ ಸೋಮವಾರ ರಾತ್ರಿ 11.34ಕ್ಕೆ ಹೊರತೆಗೆದರು.
ಆದರೆ, ಕಾವೇರಿ ಸ್ತಬ್ಧವಾಗಿದ್ದಾಳೆ. ಶನಿವಾರ ಆಟವಾಡುತ್ತಾ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದ ಹೊಲವೊಂದರ ಕೊಳವೆ ಬಾವಿಗೆ ಆಕೆ ಬಿದ್ದಿದ್ದಳು.
ಕಾವೇರಿಯನ್ನು ಬದುಕಿಸಿಕೊಳ್ಳಲು ಇಡೀ ಬೆಳಗಾವಿ ಜಿಲ್ಲಾಡಳಿತ ಹೋರಾಟ ನಡೆಸಿತು. ಆದರೆ, ಸುರಂಗ ಕೊರೆಯುವ ವೇಳೆ ಅಡ್ಡ ಸಿಕ್ಕ ಬಂಡೆಗಲ್ಲು ಎಲ್ಲ ಪ್ರಯತ್ನಕ್ಕೂ ಕಲ್ಲು ಹಾಕಿತು.
ಮತ್ತೊಂದು ಜೀವವನ್ನು ಕೊಳವೆಬಾವಿ ಆಪೋಶನ ತೆಗೆದುಕೊಂಡಿದೆ. ಹೇಳಲಿಕ್ಕೆ ಇನ್ನೇನೂ ಉಳಿದಿಲ್ಲ. ಧ್ವನಿಯೂ ಗದ್ಗದಿತ, ಶಬ್ದವೂ ಇಲ್ಲ.