ಗಡಿಯಲ್ಲಿ ಶಿವಸೇನೆ ಉದ್ಧಟತನ; ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಸೇವೆ
ಬೆಳಗಾವಿ, ಜನವರಿ 22: ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ ಖಂಡಿಸಿ ಕರವೇ ಯುವ ಸೇನೆ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಮುಂದೆ ನೆಡಲಾಗಿರುವ ಕನ್ನಡ ಧ್ವಜ ಸ್ತಂಭ ತೆರವಿಗೆ ಆಗ್ರಹಿಸಿ ಗುರುವಾರ ಶಿವಸೇನೆ ಕಾರ್ಯಕರ್ತರು ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಕರ್ನಾಟಕ ಸರ್ಕಾರ ಹಾಗೂ ಬೆಳಗಾವಿ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಉದ್ಧತಟನ ಪ್ರದರ್ಶನ ಮಾಡಿದ್ದರು.
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
ಶಿವಸೇನಾ ಕಾರ್ಯಕರ್ತರು ನಡೆಸಿದ ಪುಂಡಾಟದ ವಿರುದ್ಧ ಸಿಡಿದೆದ್ದಿರುವ ವಿವಿಧ ಕನ್ನಡಪರ ಸಂಘಟನೆಯ ಕಾರ್ಯಕರ್ತರು, ಶುಕ್ರವಾರ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಹಾರಿಸಲು ಮುಂದಾಗಿದ್ದರು. ಈ ಎಲ್ಲರನ್ನೂ ನಗರದ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು.
ವಿವಿಧ ಭಾಗಗಳಿಂದ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದ ಕನ್ನಡಪರ ಹೋರಾಟಗಾರರನ್ನು ಹೀರೇಬಾಗೇವಾಡಿಯ ಟೋಲ್ ನಲ್ಲಿ ತಡೆಯಲಾಗಿತ್ತು. ಪೊಲೀಸರು ತಡೆ ಹಿಡಿದಿದ್ದನ್ನು ಖಂಡಿಸಿ, ಹೆದ್ದಾರಿ ತಡೆಗೆ ಹೋರಾಟಗಾರರು ಮುಂದಾದರು. ಬಳಿಕ ಬೆಳಗಾವಿ ನಗರಕ್ಕೆ ಆಗಮಿಸಿದ ಕಾರ್ಯಕರ್ತರು ನಗರದ ಚೆನ್ನಮ್ಮ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ ಖಂಡಿಸಿ ಕರವೇ ಯುವ ಸೇನೆ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.#Belagavi #Karave #ShivSena @karave_KRV pic.twitter.com/mFBeRRvdTg
— oneindiakannada (@OneindiaKannada) January 22, 2021
ಶಿವಸೇನೆ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಸೇವೆಗೈದರು. ಬಳಿಕ ಮಹಾರಾಷ್ಟ್ರಕ್ಕೆ ತೆರಳಲು ಮುಂದಾದ ಕನ್ನಡ ಹೋರಾಟಗಾರರನ್ನು ಪೊಲೀಸರು ಚೆನ್ನಮ್ಮ ವೃತ್ತದಲ್ಲಿ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.