ಶಿವಸೇನೆ ಪಕ್ಷ ಸಂಘಟನೆ : ಮುತಾಲಿಕ್ಗೆ ಕಲ್ಲೇಟಿನ ಎಚ್ಚರಿಕೆ
ಬೆಳಗಾವಿ, ನವೆಂಬರ್ 27 : ಬಿಜೆಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟಿರುವ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಅವರೊಂದಿಗೆ ಹೆಗಲು ಕೊಟ್ಟಿರುವ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಅವರಿಗೆ ಬೆಳಗಾವಿಯ ಕರ್ನಾಟಕ ನವ ನಿರ್ಮಾಣ ಸೇನೆ ಕಠಿಣ ಎಚ್ಚರಿಕೆ ನೀಡಿದೆ.
ಕರ್ನಾಟಕದ ಅಖಂಡತೆಗೆ ಧಕ್ಕೆ ತರುತ್ತಿರುವ ನಾಡದ್ರೋಹಿ ಪಕ್ಷ ಶಿವಸೇನೆಯ ಬೇರು ಕರ್ನಾಟಕದಲ್ಲಿ ಊರಲು ಬಿಡುವುದಿಲ್ಲ ಎಂದು ಅಬ್ಬರಿಸಿರುವ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ "ಶಿವಸೇನೆ ಕಟ್ಟಲು ಹೊರಟವರಿಗೆ ಕಲ್ಲೇಟು ಹೊಡೆಯುವುದು ಖಂಡಿತಾ' ಎಂದು ಅಬ್ಬರಿಸಿದ್ದಾರೆ.
ಚುನಾವಣಾ ಮೈತ್ರಿ : ಶಿವಸೇನೆ ಜತೆ ಕೈಜೋಡಿಸಿದ ಶ್ರೀರಾಮಸೇನೆ
ಪ್ರಮೋದ್ ಮುತಾಲಿಕ್ ಹಾಗೂ ಬಸವರಾಜ ಯತ್ನಾಳ್ ಅವರು ಶಿವಸೇನೆ ಪಕ್ಷದ ಮೂಲಕ ರಾಜ್ಯದಲ್ಲಿ ಚುನಾವಣೆ ಸ್ಪರ್ಧಿಸುವ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ಈ ಹಿನ್ನೆಲಯಲ್ಲಿ ನವ ಕರ್ನಾಟಕ ಸೇನೆ ರಾಜ್ಯಾದ್ಯಕ್ಷ ಭೀಮಾಶಂಕರ ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವರು ರಾಜಕೀಯ ತೆವಲಿಗಾಗಿ ಶಿವಸೇನೆ ಪಕ್ಷವನ್ನು ರಾಜ್ಯದಲ್ಲಿ ಕಟ್ಟಲು ಹೊರಟಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅವರು ಯಾರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲವಾದರೂ ಅವರ ಮಾತಿನ ಮೊನಚು ಹರಯುತ್ತಿದ್ದುದು ಮಾತ್ರ ಪ್ರಮೋದ್ ಮುತಾಲಿಕ್ ಹಾಗೂ ಬಸವರಾಜ್ ಯತ್ನಾಳ್ ಅವರ ಕಡೆಗೆ.
ಬೆಳಗಾವಿ ಗಡಿ ವಿಚಾರವನ್ನ ಶಿವಸೇನೆ ಸದಾ ಜೀವಂತವಿಟ್ಟಿದೆ. ಅಂತಹಾ ಶಿವಸೇನೆ ಪಕ್ಷವನ್ನು ರಾಜ್ಯದಲ್ಲಿ ಕಟ್ಟಲು ಕೆಲವರು ಹೊರಟ್ಟಿದ್ದಾರೆ. ಶಿವಸೇನೆ ಪಕ್ಷ ಕಟ್ಟಲು ಹೊರಟವರ ಮೈಯಲ್ಲಿ ಕನ್ನಡದ ರಕ್ತಾ ಹರಿಯುತ್ತಾ? ಎಂದು ಅವರು ಪ್ರಶ್ನೆ ಮಾಡಿದರು.
ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಪಟ್ಟುಹಿಡಿದಿರುವ ಶಿವಸೇನೆ ಪಕ್ಷವು ರಾಜ್ಯದ ಜನರನ್ನು ವಿಭಜಿಸಲು ಯತ್ನಿಸುತ್ತಿರುವುದಾಗಿ ಹೇಳಿದ ಭೀಮಾಶಂಕರ್ ಅವರು ರಾಜ್ಯದಲ್ಲಿ ಶಿವಸೇನೆ ತಳ ಊರಲು ಬಿಡುವುದಿಲ್ಲ ಎಂದರು.
ಬೆಳಗಾವಿ ಗಡಿ ವಿವಾದಕ್ಕೆ ತುಪ್ಪ ಸುರಿದ ಉದ್ದವ್ ಠಾಕ್ರೆ
ಗಡಿ ವಿವಾದ ಇತ್ಯರ್ಥಕ್ಕೆ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಇದೆ ಎಂದ ಅವರು ಬೆಳಗಾವಿ ಅಧಿವೇಶನ ಸಂಪೂರ್ಣ ವಿಫಲವಾಗಿದೆ ಎಂದರು.
'ಬೆಳಗಾವಿ ಸೌಧ ರಾಜಕಾರಣಿಗಳಿಗೆ ಪಿಕ್ನಿಕ್ ಸ್ಪಾಟ್ ಆಗಿದೆ' ಎಂದು ಟೀಕಿಸಿದ ಅವರು, ಐದು ಅಧಿವೇಶನದಲ್ಲೂ ಗಡಿ ವಿಚಾರ ಪ್ರಸ್ತಾಪವಾಗಿಲ್ಲ, ಅದೇ ಮಹಾರಾಷ್ಟ್ರ ಸರ್ಕಾರ ಸದನದಲ್ಲಿ ಗಡಿ ವಿಚಾರ ಕುರಿತು ಠರಾವು ಪಾಸ್ ಮಾಡಲಾಗುತ್ತೆ, ಎಂದರು. ಯಾವುದೇ ಸರ್ಕಾರ ರಣಹೇಡಿಗಳನ್ನು ಓಲೈಕೆ ಮಾಡಬಾರದು ಎಂದು ಪರೋಕ್ಷವಾಗಿ ಶಿವಸೇನೆ ಪಕ್ಷದ ಜೊತೆ ಮೈತ್ರಿ ಬೇಡ ಎಂದರು.
ಬೆಳಗಾವಿಯ ಒಂದಿಂಚು ಮಣ್ಣು ಮುಟ್ಟಲು ಶಿವಸೇನೆಗೆ ಅವಕಾಶ ನೀಡುವುದಿಲ್ಲ ಎಂದ ಅವರು. ಉದ್ಧವ ಠಾಕ್ರೆ ರಾಜಕೀಯ ತೆವಲಿಗಾಗಿ ಗಡಿ ವಿಚಾರ ಕೆದಕದಂತೆ ಎಚ್ಚರಿಕೆ ನೀಡಿದರು ಹಾಗೂ ಬೆಳಗಾವಿ ವಿಭಜನೆ ಹೋರಾಟದಲ್ಲಿ ಗುರುತಿಸಿಕೊಂಡಿರುವ ಶಿವಾಜಿ ಸುಂಟಕರಗೆಯನ್ನು ಬಿಜೆಪಿ ಪಕ್ಷದಿಂದ ಹೊರಹಾಕಬೇಕು. ಬಿಎಸವೈ ತಕ್ಷಣವೇ ಸುಂಟಕರನನ್ನ ಪಕ್ಷದಿಂದ ವಜಾ ಮಾಡಬೇಕು ಎಂದ ಅವರು ಆಗ್ರಹಿಸಿದರು.