ಕುಮಾರಸ್ವಾಮಿ ಇರುವುದು ಹೆಬ್ಬೆಟ್ಟು ಒತ್ತುವುದಕ್ಕಲ್ಲ: ಹೊರಟ್ಟಿ ಅಸಮಾಧಾನ
ಬೆಳಗಾವಿ, ಡಿಸೆಂಬರ್ 12: ವಿಧಾನ ಪರಿಷತ್ ಸಭಾಪತಿ ಸ್ಥಾನ ಕೈತಪ್ಪಿರುವುದರ ವಿರುದ್ಧ ಅಸಮಾಧಾನಗೊಂಡಿರುವ ಜೆಡಿಎಸ್ ಶಾಸಕ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.
ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪರಿಷತ್ನ ಹಂಗಾಮಿ ಸಭಾಪತಿಯಾಗಿ ಆಯ್ಕೆಯಾಗಿದ್ದ ಹೊರಟ್ಟಿ ಅವರನ್ನೇ ಮುಂದುವರಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಸಚಿವ ಸ್ಥಾನ ಸಿಗುವುದಿಲ್ಲ ಎಂದು ಖಚಿತವಾದ ಬಳಿಕ ಹೊರಟ್ಟಿ, ಸಭಾಪತಿ ಸ್ಥಾನದಲ್ಲೇ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಅಳುತ್ತಾ ಸದನದಿಂದ ಹೊರನಡೆದ ಬಸವರಾಜ ಹೊರಟ್ಟಿ, ಏನು ಕಾರಣ?
ಆದರೆ, ಅತ್ತ ಪಟ್ಟುಬಿಡದ ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ತನ್ನ ಕಡೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ನ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇತ್ತ ಸಚಿವ ಸ್ಥಾನವೂ ಇಲ್ಲದೆ, ಅತ್ತ ಪರಿಷತ್ ಸಭಾಪತಿ ಹುದ್ದೆಯೂ ಇಲ್ಲದೆ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರ ಅತೃಪ್ತಿಗೆ ಕಾರಣವಾಗಿದೆ.
ಹೀಗಾಗಿ ಬುಧವಾರ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ವರಿಷ್ಠ ಎಚ್ ಡಿ ದೇವೇಗೌಡ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ಶಾಸಕರ ಸಭೆ ಕರೆದ ಕುಮಾರಸ್ವಾಮಿ
ಜೊತೆಗೆ ಸರ್ಕಾರ ರಚನೆ ವೇಳೆ ಬೇಷರತ್ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್, ಈಗ ನಿತ್ಯವೂ ಷರತ್ತು ವಿಧಿಸುತ್ತಿದೆ ಎಂದೂ ಕಿಡಿಕಾರಿದ್ದಾರೆ.
ಹೆಬ್ಬೆಟ್ಟು ಒತ್ತುವುದಕ್ಕಲ್ಲ
ಮುಖ್ಯಮಂತ್ರಿ ಇರುವುದು ಕೇವಲ ಹೆಬ್ಬೆಟ್ಟು ಒತ್ತುವುದಕ್ಕಲ್ಲ. ಕಾಂಗ್ರೆಸ್ನವರು ಹೇಳಿದ್ದಕ್ಕೆಲ್ಲಾ ಕುಮಾರಸ್ವಾಮಿ ಅವರು ಹೆಬ್ಬೆಟ್ಟು ಒತ್ತುತ್ತಾ ಹೋದರೆ ನಮ್ಮ ಪಕ್ಷದ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಮುಖ ಹುದ್ದೆಗಳ ವಿಚಾರದಲ್ಲಿ ಕಾಂಗ್ರೆಸ್ ಹೇಳಿದಂತೆಯೇ ನಡೆಯುತ್ತಿರುವುದು ಇದೇ ರೀತಿ ಮುಂದುವರಿದರೆ ಹೆಬ್ಬೆಟ್ಟು ಒತ್ತುವುದಕ್ಕಷ್ಟೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಕೋಪದಿಂದ ನುಡಿದಿದ್ದಾರೆ.
ಮೈತ್ರಿ ಧರ್ಮ ಪಾಲಿಸುತ್ತಿಲ್ಲ
ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಮೈತ್ರಿ ಪಾಲನೆಯಾಗುತ್ತದೆ ಎಂಬ ವಿಶ್ವಾಸದಿಂದ ಲಾಬಿ ನಡೆಸಿರಲಿಲ್ಲ. ಕಾಂಗ್ರೆಸ್ನವರು ಹಾಗೆಯೇ. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಬೇಷರತ್ ಬೆಂಬಲ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ರಚನೆಗೆ ಸ್ವತಃ ಮುಂದೆ ಬಂದಿತ್ತು. ಹಾಗಾಗಿ ಮೈತ್ರಿ ಸರ್ಕಾರಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ, ಈಗ ಪ್ರತಿಯೊಂದಕ್ಕೂ ಷರತ್ತುಗಳನ್ನು ವಿಧಿಸುತ್ತಿದ್ದಾರೆ ಎಂದು ಹೊರಟ್ಟಿ ಆರೋಪಿಸಿದ್ದಾರೆ.
1512 ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮ: ಕುಮಾರಸ್ವಾಮಿ
ಲಾಬಿ ನಡೆಸಿರಲಿಲ್ಲ
ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದರಿಂದ ಸಭಾಪತಿ ಸ್ಥಾನವನ್ನು ತಮಗೆ ನೀಡುವುದು ಖಚಿತ ಎಂದೇ ಭಾವಿಸಿದ್ದಾಗಿ ಹೊರಟ್ಟಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೂ ತಾವು ಆಪ್ತರಾಗಿರುವುದರಿಂದ ಮೈತ್ರಿ ಸರ್ಕಾರದಿಂದ ವಿರೋಧ ವ್ಯಕ್ತವಾಗುವುದಿಲ್ಲ ಎಂದೆನಿಸಿತ್ತು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸೇರಿ ಬಿಜೆಪಿಯ ಶಂಕರ್ ಮೂರ್ತಿ ಅವರ ಬದಲು ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಮುಂದಾಗಿದ್ದರು. ಈಗ ಏಕೆ ಹೊರಟ್ಟಿ ಬೇಡವಾದರು ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿದ್ದರೂ ಸಭಾಪತಿ ಸ್ಥಾನಕ್ಕಾಗಿ ಲಾಬಿ ನಡೆಸಿರಲಿಲ್ಲ. ವರಿಷ್ಠರ ಗಮನಕ್ಕೆ ತಾರದೆಯೇ ಸಭಾಪತಿ ಆಯ್ಕೆ ಮಾಡಿದ್ದಾರೆ. ಈ ನಡೆಯಿಂದ ಮೈತ್ರಿ ಸರ್ಕಾರದ ಮೇಲೆ ಪ್ರಭಾವ ಉಂಟಾಗಲಿದೆ. ಕಾಂಗ್ರೆಸ್ ನಡೆಯಿಂದ ಬೇಸರವಾಗಿದೆ. ಇನ್ನು ಮುಂದೆ ತಟಸ್ಥವಾಗಿರುತ್ತೇನೆ ಎಂದು ಹೊರಟಿ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿಯೂ ಒಗ್ಗಟ್ಟಿಲ್ಲ
ಕಾಂಗ್ರೆಸ್ನಲ್ಲಿಯೂ ಒಗ್ಗಟ್ಟಿಲ್ಲ. ಅಲ್ಲಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಸ್ ಆರ್ ಪಾಟೀಲ್ ಅವರನ್ನು ಸಭಾಪತಿ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ನ ಈ ವರ್ತನೆಯನ್ನು ಪ್ರಶ್ನಿಸುವಂತೆ ದೇವೇಗೌಡರನ್ನು ಕೇಳಿಕೊಳ್ಳುವುದಾಗಿ ತಿಳಿಸಿದ್ದಾರೆ.
ಪಕ್ಷದಿಂದ ಹೊರಬರಲಿ
ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಕೈತಪ್ಪಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಉಮೇಶ್ ಕತ್ತಿ, ಅವರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಹೊರಕ್ಕೆ ಬರಲಿ ಎಂದು ಸಲಹೆ ನೀಡಿದ್ದಾರೆ. ಈ ಪಕ್ಷಗಳು ಉತ್ತರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡಿಕೊಂಡು ಬರುತ್ತಿವೆ. ಹೀಗಾಗಿ ಅವರು ಅವುಗಳಿಂದ ಹೊರಬರಲಿ ಎಂದು ಹೇಳಿದ್ದಾರೆ.