ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ; ಸತೀಶ್ ಜಾರಕಿಹೊಳಿ
ಬೆಳಗಾವಿ, ಏಪ್ರಿಲ್ 20; " ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 4 ಜನ ಮಂತ್ರಿಗಳಿದ್ದರೂ ಏನು ಪ್ರಯೋಜನ?. ಇಲ್ಲಿಯವರೆಗೂ ಒಂದು ಸಭೆಯನ್ನು ಕೂಡಾ ಮಾಡಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.
ಮಂಗಳವಾರ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಉಸ್ತುವಾರಿ ಮಂತ್ರಿಗಳೇ ಬೇಕು ಅಂತಿಲ್ಲ. ಜಿಲ್ಲೆಯ ನಾಲ್ವರು ಸಚಿವರು ಇದ್ದಾರೆ. ಅವರ ಮೇಲೆ ಜವಾಬ್ದಾರಿ ಇದೆ" ಎಂದರು.
ಕೋವಿಡ್ ನಿಯಮ ಉಲ್ಲಂಘನೆ; ಪ್ರಯಾಣಿಕರನ್ನು ಇಳಿಸಿದ ಡಿಸಿ!
"ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೆಂದು ಕೈಚಲ್ಲಿ ಕುಳಿತುಕೊಳ್ಳದೇ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಬೇಕು. ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು" ಎಂದು ಕರೆ ನೀಡಿದರು.
ಬೆಂಗಳೂರಿಗೆ ಪ್ರತ್ಯೇಕ ಕೋವಿಡ್ 19 ನಿಯಮ ಜಾರಿ: ಸಚಿವ ಅಶೋಕ್
"ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸರ್ಕಾರ ಏನು ಸಾಧನೆ ಮಾಡಲು ಹೊರಟ್ಟಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ನೈಟ್ ಕರ್ಫ್ಯೂದಿಂದ ಕೋವಿಡ್ ನಿಯಂತ್ರಣವಾಗುವುದು ಕಷ್ಟ ಸಾಧ್ಯ. 144 ಸೆಕ್ಷನ್ ಜಾರಿ ಮಾಡಿ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು" ಎಂದು ಸಲಹೆ ಕೊಟ್ಟರು.
ಕರ್ನಾಟಕದಲ್ಲಿ 15,785 ಹೊಸ ಕೋವಿಡ್ ಪ್ರಕರಣ ಪತ್ತೆ
"ಲಾಕ್ ಡೌನ್ ಜಾರಿಗೊಳಿಸಬಾರದು, ಇದರಿಂದಾಗಿ ಕಾರ್ಖಾನೆ ಸೇರಿ ಎಲ್ಲವೂ ಬಂದ್ ಆಗಲಿವೆ. ಇದರಿಂದ ಯುವಕರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಈಗಾಗಲೇ ಕಳೆದ ವರ್ಷದ ಲಾಕ್ ಡೌನ್ ದಿಂದ ಜನರು ಚೇತರಿಸಿಕೊಂಡಿಲ್ಲ. ಮತ್ತೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡರೆ ಜನ ಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಲಿದೆ" ಎಂದರು.
ಉಪ ಚುನಾವಣೆ: "ಬೆಳಗಾವಿ ಲೋಕಸಭಾ ಉಪಚುನಾವಣೆ ಮತದಾನ ಮುಗಿದಿದೆ. ಎರಡು ಪಕ್ಷದವರು, ಕಾರ್ಯಕರ್ತರು ಎಲ್ಲರೂ ಲೆಕ್ಕಾಚಾರ ಮಾಡುತ್ತಿದ್ದಾರೆ. ಅಧಿಕಾರಿಗಳು, ಕಾರ್ಯಕರ್ತರು ಚುನಾವಣೆ ವೇಳೆ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. 20 ವರ್ಷ ಬಳಿಕ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತದೆ" ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತ ಪಡಿಸಿದರು.
"ಮತದಾನ ಕಡಿಮೆಯಾಗಿರುವುದು ಯಾರಿಗೆ ಲಾಭ?, ಯಾರಿಗೆ ನಷ್ಟ? ಅನ್ನುವುದಕ್ಕೆ ಆಗುವುದಿಲ್ಲ. ಹೆಚ್ಚಾಗಿದ್ದರೆ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದೇವು. ಕಡಿಮೆ ಆಗಿದೆ ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತದೆ" ಎಂದು ಹೇಳಿದರು.