ಮರಳು ಹಗರಣ ತನಿಖೆ ಕೊನೆಗೂ ಸಿಐಡಿ ಹೆಗಲಿಗೆ
ಬೆಳಗಾವಿ, ಡಿ. 18: ಮರಳು ಹಗರಣದ ತನಿಖೆಯನ್ನು ಕೊನೆಗೂ ಸಿಐಡಿಗೆ ಒಪ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ಕುರಿತು ತೀವ್ರ ಚರ್ಚೆ ನಡೆಯಿತು.
ಅಕ್ರಮ ಸಾಗಣೆ ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಆದ್ದರಿಂದ ಈ ಕುರಿತು ಚರ್ಚಿಸಲು ಸ್ಪೀಕರ್ ಕೊಠಡಿಯಲ್ಲಿ ಸರ್ವ ಪಕ್ಷಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ತೀವ್ರ ಚರ್ಚೆ ನಡೆದು ಕೊನೆಗೆ ಹಗರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿತು.
ಸಮಿತಿ ರಚನೆಗೆ ನಿರ್ಧಾರ : ರಾಜ್ಯದಲ್ಲಿ ಎದ್ದಿರುವ ಮರಳು ವಿವಾದ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಈ ಸಮಿತಿಯಲ್ಲಿ ಶಾಸಕರೂ ಇರಲಿದ್ದಾರೆ. ಸಮಿತಿಯು ಸಲ್ಲಿಸುವ ವರದಿಯನ್ನು ಆಧರಿಸಿ ನೂತನ ಮರಳು ನೀತಿ ರಚಿಸುವ ಕುರಿತು ಚಿಂತಿಸಲಾಗುವುದು. ಈ ಸಮಿತಿಗೆ ಸದಸ್ಯರನ್ನು ಶೀಘ್ರ ನೇಮಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮರಳು ಸರಬರಾಜು, ಅಕ್ರಮ ಸಾಗಣೆ ಹಾಗೂ ಈ ಕುರಿತು ದಾಖಲಾಗಿರುವ ದೂರುಗಳ ಕುರಿತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದೀರ್ಘ ವಿವರಣೆ ನೀಡಿದರು.