ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ಮಸೂದೆ: ಸರ್ಕಾರಕ್ಕೆ ಹಿನ್ನಡೆ
ಬೆಳಗಾವಿ, ಡಿಸೆಂಬರ್ 24: ವಿಪಕ್ಷ ಕಾಂಗ್ರೆಸ್ ಒತ್ತಡಕ್ಕೆ ಮಣಿದ ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಮಸೂದೆಯನ್ನು ಸದ್ಯಕ್ಕೆ ಹಿಂತೆಗೆದುಕೊಂಡು, ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿದೆ.
ಶುಕ್ರವಾರ ಸಂಜೆ ಐದು ನಿಮಿಷಗಳ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪ ಮತ್ತೆ ಆರಂಭವಾಯಿತು. ಸಭಾಪತಿ ಕೊಠಡಿಯಲ್ಲಿ ನಡೆದ ತೀರ್ಮಾನದಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ 2021 ಮಂಡನೆ ಕೈಬಿಟ್ಟಿರುವುದಾಗಿ, ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಸಂಧಾನ ಸಭೆಯಲ್ಲಿ ಮುಂದಿನ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಇಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು ಮೊದಲೇ ಹಾಜರಿದ್ದರೂ, ಆಡಳಿತ ಪಕ್ಷ ಸದಸ್ಯರು 1 ಗಂಟೆ ತಡವಾಗಿ ಬಂದರು. ಹೀಗಾಗಿ ವಿಧಾನಸಭೆಯಲ್ಲಿ ಬಿಲ್ ಮಂಡನೆಯಾದ ರೀತಿ ಬಗ್ಗೆ ಆಕ್ಷೇಪ ಕೂಡ ವ್ಯಕ್ತವಾಯಿತು.
ಏಕಾಏಕಿ ಬಿಲ್ ತಂದರೆ ಚರ್ಚೆ ಸಾಧ್ಯವಿಲ್ಲ ಎಂದು ಗಲಾಟೆ ನಡೆದಿದ್ದು, ಚರ್ಚೆಗೆ ಸಮಯ ಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಬೆಳಗ್ಗೆಯಿಂದ ಏಕೆ ಬಿಲ್ ಮಂಡಿಸಿಲ್ಲ. ನಿಮ್ಮ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಸಮಯ ವ್ಯರ್ಥ ಮಾಡಲಾಗಿದೆ. ಸಮಯ ವ್ಯರ್ಥ ಮಾಡಿದ್ದೀರಿ ಎಂದು ಪ್ರತಿಪಕ್ಷ ಆರೋಪ ಮಾಡಿತ್ತು. ಏಕಾಏಕಿ ಬಿಲ್ ಮಂಡನೆಗೆ ಅವಕಾಶ ನೀಡಲ್ಲವೆಂದು ಗಲಾಟೆ ಕೇಳಿಬಂತು.
ಕೆಲಕಾಲ ರಣರಂಗವಾಗಿದ್ದ ವಿಧಾನ ಪರಿಷತ್ ಕಲಾಪದ ಹಿನ್ನೆಲೆ ಸಭಾಪತಿ ಕೊಠಡಿಯಲ್ಲಿ ನಾಯಕರ ಸಂಧಾನ ಸಭೆ ನಡೆಸಲಾಯಿತು. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಸಂಧಾನ ಸಭೆಯಲ್ಲಿ ಮುಂದಿನ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಮತಾಂತರ ನಿಷೇಧ ವಿಧೇಯಕ ತರಲ್ಲ ಎಂದು ನೀವು ಹೇಳಿದಿರಿ. ನಮ್ಮವರೆಲ್ಲರನ್ನೂ ಹೊರಗಡೆ ಕಳುಹಿಸಿ ಬಿಲ್ ತರಲು ಪ್ರಯತ್ನ ಮಾಡಿದ್ದೀರಿ. ಈಗ ಕಾಲಹರಣ ಮಾಡಿ ಬಿಲ್ ಮಂಡಿಸಲು ರೆಡಿ ಅಂತಿದ್ದೀರಲ್ಲ ಎಂದು ಪರಿಷತ್ನಲ್ಲಿ ಸಿ.ಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಸದಸ್ಯರು ಬರುವುದಕ್ಕಾಗಿ ನಾವೆಲ್ಲರೂ ಕಾಯಬೇಕಾ, ಬೇಕಾದರೆ ನಾಳೆಗೆ ಮುಂದೂಡಿ ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸುತ್ತೇವೆ ಎಂದು ಸರ್ಕಾರದ ಪರವಾಗಿ ವಿಧಾನ ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದ್ದಾರೆ. ಮತಾಂತರ ನಿಷೇಧ ಮಸೂದೆಯನ್ನು ಸರ್ಕಾರ ಮಂಡಿಸುತ್ತಿಲ್ಲ. ಮುಂದಿನ ಅಧಿವೇಶನದಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇದಕ್ಕೂ ಮೊದಲು ಪರಿಷತ್ ಕಲಾಪಕ್ಕೆ ಕೆಲಕಾಲ ಬ್ರೇಕ್ ನೀಡಿರುವ ಸಭಾಪತಿ, ಕಾಂಗ್ರೆಸ್ ಸದಸ್ಯರ ಜತೆ ಸಭೆ ನಡೆಸಿದ್ದರು. ಸದನ ನಾಯಕರು, ವಿಪಕ್ಷಗಳ ನಾಯಕರ ಜತೆ ಸಭಾಪತಿ ಬಸವರಾಜ ಹೊರಟ್ಟಿ ಸಭೆ ನಡೆಸಿದ್ದಾರೆ. ನಾನು ತಿಳಿದು ತಿಳಿದು ನಾನು ಕಾಲಹರಣ ಮಾಡಿಲ್ಲ. ಬಿಜೆಪಿ ನಾಯಕರೇ ಕಾಲಾವಕಾಶಕ್ಕೆ ಮನವಿ ಮಾಡಿದ್ದರು. ಇದರ ಬಗ್ಗೆ ನಿಮ್ಮ ಜೊತೆ ಚರ್ಚಿಸಿದ್ದೇವೆ ಅಂದರು.
ಹೀಗಾಗಿ ನಾನು ಕಾಲಾವಕಾಶ ಕೊಟ್ಟಿದ್ದೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದರು. ಬಳಿಕ ಪರಿಷತ್ ಕಲಾಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸದನಕ್ಕೆ ತಡವಾಗಿ ಬಂದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಇದೀಗ ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಆದೇಶಿಸಿದ್ದಾರೆ.