ಕೆ. ಕಲ್ಯಾಣ್ ಸಂಸಾರದಲ್ಲಿ ಬಿರುಕು ಮೂಡಿಸಿ ದೋಚಿದ್ದು 1 ಕೋಟಿ!
ಬೆಳಗಾವಿ, ಅಕ್ಟೋಬರ್.12: ಸ್ಯಾಂಡಲ್ ವುಡ್ ನ ಖ್ಯಾತ ಗೀತ ರಚನೆಕಾರ ಕೆ. ಕಲ್ಯಾಣ್ ಕುಟುಂಬದಲ್ಲಿ ಬಿರುಕು ಮೂಡಿಸಿದ ಆರೋಪಿ ಕೋಟಿಗಟ್ಟಲೆ ಹಣವನ್ನು ದೋಚಿರುವುದು ಬೆಳಗಾವಿ ನಗರದ ಮಾಳ ಮಾರುತಿ ಠಾಣೆ ಪೊಲೀಸರು ನಡೆಸಿದ ತನಿಖೆಯಲ್ಲಿ ಸಾಬೀತಾಗಿದೆ.
ಕೆ. ಕಲ್ಯಾಣ್ ಅವರು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ವಂಚನೆ ಹಿಂದಿನ ಜಾಲವನ್ನು ಪತ್ತೆ ಮಾಡಿದ್ದಾರೆ. ಅಪಹರಕ್ಕೆ ಒಳಗಾಗಿದ್ದ ಕೆ. ಕಲ್ಯಾಣ್ ಅವರ ಪತ್ನಿ ಅಶ್ವಿನಿ, ಅತ್ತೆ ರಾಧಿಕಾ ಸಾತ್ವಿಕ್, ಮಾವ ಕೃಷ್ಣಾ ಸಾತ್ವಿಕ್ ರನ್ನು ರಕ್ಷಿಸಿದ ಪೊಲೀಸರು ಹೇಳಿಕೆ ದಾಖಲಿಸಿಕೊಂಡು ಆರೋಪಿ ಶಿವಾನಂದ ಬಸವರಾಜ ವಾಲಿಯನ್ನು ಬಂಧಿಸಿದ್ದಾರೆ.
ಕೆ.ಕಲ್ಯಾಣ್ ಕುಟುಂಬ ಕಲಹ ವಿಚಾರ; ಶಿವಾನಂದ ವಾಲಿ ಪೊಲೀಸರ ವಶಕ್ಕೆ
ಪೊಲೀಸರು ನಡೆಸಿದ ವಿಚಾರಣೆ ವೇಳೆ ಆಸ್ತಿ ಲಪಟಾಯಿಸುವುದಕ್ಕಾಗಿ ಗಂಗಾ ಕುಲಕರ್ಣಿ ಎಂಬುವವರ ಮೂಲಕ ಮನೆ ಕೆಲಸದವರ ನೆಪದಲ್ಲಿ ಕೆ. ಕಲ್ಯಾಣ್ ಅವರ ಮನೆಗೆ ಸೇರಿಕೊಂಡಿದ್ದು ಬೆಳಕಿಗೆ ಬಂದಿದೆ. ಅಲ್ಲದೇ ಪತಿ-ಪತ್ನಿ ನಡುವೆ ಜಗಳವನ್ನು ತಂದಿಟ್ಟಿರುವ ಬಗ್ಗೆ ಒಪ್ಪಿಕೊಳ್ಳಲಾಗಿದೆ.
ಮಾಟ-ಮಂತ್ರದ ಬಗ್ಗೆ ಆರೋಪಿಸಿ ಹಣ ಸುಲಿಗೆ:
ಕೆ. ಕಲ್ಯಾಣ್ ಅವರು ಮಾಟ ಮಂತ್ರ ಮಾಡಿಸಿರುತ್ತಾರೆ ಎಂದು ಆರೋಪಿಗಳಾದ ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣ ಭಯ ಹುಟ್ಟಿಸುತ್ತಾರೆ. ಆ ಮಾಟ-ಮಂತ್ರ ಪರಿಹಾರಕ್ಕೆ ವಿಶೇಷ ಪೂಜೆಗಳನ್ನು ಮಾಡಿಸಬೇಕು. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿಕೊಂಡು ಕೆ. ಕಲ್ಯಾಣ್ ಅವರ ಅತ್ತೆ ಮತ್ತು ಮಾವರಿಂದ 45 ಲಕ್ಷ ರೂಪಾಯಿ ಹಣವನ್ನು ಶಿವಾನಂದ ವಾಲಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಮ್ಯಾಕ್ಸಿ ಕ್ಯಾಬ್ ಖರೀದಿಸಿದ ಆರೋಪಿ:
ಗೀತ ರಚನೆಕಾರ ಕೆ ಕಲ್ಯಾಣ್ ಅವರ ಅತ್ತೆ ಮತ್ತು ಮಾವನಿಂದ ಪಡೆದ 45 ಲಕ್ಷ ರೂಪಾಯಿ ಹಣದಲ್ಲೇ ಮ್ಯಾಕ್ಸಿ ಕ್ಯಾಬ್ ಖರೀದಿಸಿದ ಆರೋಪಿ ಶಿವಾನಂದ ವಾಲಿಗೆ ಹಣದ ರುಚಿ ಹತ್ತಿದೆ. ಬೆನ್ನಲ್ಲೇ ನಿಮ್ಮಲ್ಲಿರುವ ಬೆಳ್ಳಿ ಬಂಗಾರದ ವಸ್ತುಗಳಿಂದ ನಿಮ್ಮ ಜೀವಕ್ಕೇ ಅಪಾಯವಿದೆ ಎಂದು ಬೆದರಿಸಿ ಅವರ ಬಳಿಯಿದ್ದ ವಸ್ತುಗಳನ್ನೆಲ್ಲ ದೋಚಿಕೊಂಡಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ವಶ:
ಇನ್ನು, ಪೊಲೀಸರು ಬಂಧಿತ ಆರೋಪಿಯಿಂದ 1 ಕೋಟಿ ರೂಪಾಯಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 350 ಗ್ರಾಂ ಚಿನ್ನದ ಆಭರಣ, 6 ಕೆಜಿ ಬೆಳ್ಳಿ ವಸ್ತುಗಳು, 9 ಮ್ಯಾಕ್ಸಿ ಕ್ಯಾಬ್ ವಾಹನಗಳು, ಇದರ ಜೊತೆಗೆ 5 ರಿಂದ 6 ಕೋಟಿ ರೂಪಾಯಿ ಬೆಲೆ ಬಾಳುವ ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ ನಗರ, ಕಿಂದೊಳ್ಳಿ ಕ್ರಾಸ್, ಅಥಣಿ, ಶಿರಹಟ್ಟಿ ಪ್ರದೇಶಗಳಲ್ಲಿದ್ದ ಆಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.