ನರೇಂದ್ರ ಮೋದಿಯನ್ನು ಹೊಗಳಿದ ಸಚಿವ ಜಿ.ಟಿ. ದೇವೇಗೌಡ
ಬೆಳಗಾವಿ, ಮೇ 30: ಎರಡನೆಯ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೆಡಿಎಸ್ ಮುಖಂಡ, ಸಚಿವ ಜಿ.ಟಿ. ದೇವೇಗೌಡ ಕೊಂಡಾಡಿದ್ದಾರೆ.
ಪ್ರಧಾನಿ ಮೋದಿ ಅವರು ದೇಶಸೇವೆಗಾಗಿ ತಮ್ಮನೇ ಸಮರ್ಪಿಸಿಕೊಂಡಿದ್ದಾರೆ. ಅವರಿಗೆ ಸ್ವಂತ ಆಸಕ್ತಿಗಳಿಲ್ಲ. ಯಾವಾಗಲೂ ದೇಶದ ಬಗ್ಗೆ ಮಾತನಾಡುತ್ತಾರೆ. ಈ ಕಾರಣಕ್ಕಾಗಿಯೇ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದು ದೇವೇಗೌಡ ಶ್ಲಾಘಿಸಿದ್ದಾರೆ.
ಪ್ರಜ್ವಲ್ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಜಿ.ಟಿ. ದೇವೇಗೌಡ
ಬೆಳಗಾವಿಯಲ್ಲಿ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೋದಿ ಅವರು ಚಹಾ ಮಾರುತ್ತಿದ್ದರು ಎಂಬ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಚಹಾ ಮಾರುವುದರಿಂದ ಅವರು ಈ ಹಂತಕ್ಕೆ ಕಷ್ಟಪಟ್ಟು ಬಂದಿದ್ದಾರೆ. ಏಟು ತಿಂದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ತಗ್ಗಿ ಬಗ್ಗಿ ನಡೆದವರಿಗೆ ಗೌರವ ಜಾಸ್ತಿ. ವಿದ್ಯಾರ್ಥಿಗಳು ಸಹ ಎಷ್ಟೇ ಕಷ್ಟ ಬಂದರೂ ಎಂದಿಗೂ ಸಾಧನೆಯ ಮಾರ್ಗವನ್ನು ಬಿಡಬಾರದು ಎಂದರು.
ಜ್ಞಾನೋದಯವಾಗಿದೆ, ಒಂದೇ ತಟ್ಟೆಯಲ್ಲಿ ಊಟ ಮಾಡುವ ಕಾಲ ಬಂದಿದೆ: ಜಿ.ಟಿ. ದೇವೇಗೌಡ
ತಂದೆ ತಾಯಿಗೆ ಗೌರವ ನೀಡಬೇಕು. ಮೋದಿ ಅವರು ತಮ್ಮ ತಾಯಿಗೆ ನಮಸ್ಕರಿಸುವುದನ್ನು ಮಾಧ್ಯಮಗಳಲ್ಲಿ ತೋರಿಸುತ್ತಾರೆ. ಅವರ ನಡತೆಯಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ವಿನಯತೆ ಇದೆ. ಮೋದಿ ಅವರಂತೆಯೇ ಹೆತ್ತವರನ್ನು ಗೌರವಿಸಿ ನಮಿಸಿದರೆ ಶಿಕ್ಷಣದ ಜತೆ ಸಂಸ್ಕಾರವೂ ಮೈಗೂಡುತ್ತದೆ ಎಂದು ಹೇಳಿದರು.
ಜಿ,ಟಿ. ದೇವೇಗೌಡರು ಆ 'ಸತ್ಯ' ಹೇಳಬಾರದಿತ್ತು ಎಂದ ಸಿದ್ದರಾಮಯ್ಯ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಡಿಟಿ, ಮೋದಿ ಅವರನ್ನು ಈ ಹಿಂದೆಯೂ ಹೊಗಳಿದ್ದೇನೆ. ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಸಂದರ್ಭದಲ್ಲಿಯೂ ಅವರನ್ನು ಶ್ಲಾಘಿಸಿದ್ದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಅವರನ್ನು ಹೊಗಳಿದ ಮಾತ್ರಕ್ಕೆ ನಾನು ಬಿಜೆಪಿ ಸೇರುತ್ತೇನೆ ಎಂದಲ್ಲ ಎಂದು ಸ್ಪಷ್ಟನೆ ನೀಡಿದರು.