ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ; ಮತ್ತೆ ಸರ್ಕಾರಿ ಕಾರು
ಬೆಳಗಾವಿ, ಫೆಬ್ರವರಿ 06 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದರು. ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಅದರಲ್ಲೂ ಜಿಲ್ಲೆಯ ಪ್ರಭಾವಿ ಜಾರಕಿಹೊಳಿ ಕುಟುಂಬಕ್ಕೆ ಮತ್ತೆ ಸಚಿವ ಸ್ಥಾನ ಸಿಕ್ಕಿದೆ.
ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಜಾರಕಿಹೊಳಿ ಕುಟುಂಬದ ಒಬ್ಬರು ಸಚಿವರಾಗಿರುತ್ತಾರೆ. ಮನೆಯ ಮುಂದೆ ಸರ್ಕಾರಿ ಕಾರು ಬಂದು ನಿಂತಿರುತ್ತದೆ. ರಾಜ್ಯ ರಾಜಕೀಯದಲ್ಲಿ ಅಷ್ಟು ಪ್ರಭಾವವನ್ನು ಈ ಕುಟುಂಬ ಹೊಂದಿದೆ.
15 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನವಿಲ್ಲ
ಜಾರಕಿಹೊಳಿ ಕುಟುಂಬದಲ್ಲಿ ಮೂವರು ಹಾಲಿ ಶಾಸಕರಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಸತೀಶ್ ಜಾಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮೂವರು ಸಹ ವಿವಿಧ ಸರ್ಕಾರಗಳು ಬಂದಾಗ ಸಚಿವ ಸ್ಥಾನವನ್ನು ಪಡೆಯುತ್ತಾರೆ.
ಉದ್ಯಮ, ರಾಜಕೀಯ : ಜಾರಕಿಹೊಳಿ ಸಹೋದರರ ಪ್ರಭಾವವಿದು!
2019ರ ಆಗಸ್ಟ್ನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಸಂಪುಟ ವಿಸ್ತರಣೆ ಮಾಡಿದರು. ಆಗ ಜಾರಕಿಹೊಳಿ ಕುಟುಂಬದ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈಗ ಗೋಕಾಕ್ ಉಪ ಚುನಾವಣೆಯಲ್ಲಿ ಗೆದ್ದ ಸಾಹುಕಾರ್ ಖ್ಯಾತಿಯ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಪಡೆದಿದ್ದಾರೆ.
ಬೆಂಗಳೂರು, ಬೆಳಗಾವಿ; ಇದು ಯಡಿಯೂರಪ್ಪ ಸಂಪುಟ!
ರಾಜಕೀಯದಲ್ಲಿ ಮೂವರು ಸಕ್ರಿಯ
ಕರ್ನಾಟಕದ ರಾಜಕೀಯದಲ್ಲಿ ಜಾರಕಿಹೊಳಿ ಕುಟುಂಬದ ಮೂವರು ಸಕ್ರಿಯರಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ (ಅರಭಾವಿ), ರಮೇಶ್ ಜಾರಕಿಹೊಳಿ (ಗೋಕಾಕ್), ಸತೀಶ್ ಜಾರಕಿಹೊಳಿ (ಯಮಕನಮರಡಿ) ಕ್ಷೇತ್ರದ ಶಾಸಕರಾಗಿದ್ದಾರೆ. ಈಗ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಕ್ಕಿದೆ.
ಕುಟುಂಬದ ಒಬ್ಬರು ಸಚಿವರು
ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ ಜಾರಕಿಹೊಳಿ ಕುಟುಂಬದ ಒಬ್ಬರು ಸಚಿವರಾಗಿರುತ್ತಾರೆ. ಮೊದಲು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗ ಸತೀಶ್ ಜಾರಕಿಹೊಳಿ ಸಚಿವರಾದರು. ಬಳಿಕ ಬಿಜೆಪಿ ಸರ್ಕಾರ ಬಂದಾಗ ಬಾಲಚಂದ್ರ ಜಾರಕಿಹೊಳಿ ಸಚಿವರಾದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸಚಿವರಾದರು. ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಬಂದಾಗ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಪಡೆದರು.
ರಾಜಕೀಯ ಮತ್ತು ಉದ್ಯಮ
ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಪ್ರಭಾವಿ ಕುಟುಂಬ. ಉದ್ಯಮ ಮತ್ತು ರಾಜಕೀಯದಲ್ಲಿ ಈ ಕುಟುಂಬ ಸಕ್ರಿಯವಾಗಿದೆ. ಹಲವಾರು ಸಕ್ಕರೆ ಕಾರ್ಖಾನೆಗಳ ಒಡೆತನವನ್ನು ಈ ಕುಟುಂಬ ಹೊಂದಿದೆ. ರಾಜಕೀಯವಾಗಿಯೂ ಬಲಿಷ್ಠವಾಗಿದೆ.
ಬೆಳಗಾವಿ ರಾಜಕೀಯ
ಕರ್ನಾಟಕದ ರಾಜಕೀಯವೇ ಬೇರೆ ಬೆಳಗಾವಿ ರಾಜಕೀಯವೇ ಬೇರೆ ಎಂಬ ಮಾತಿದೆ. ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳು ಜಿಲ್ಲೆಯ ರಾಜಕೀಯದಲ್ಲಿ ದಶಕಗಳಿಂದ ಹಿಡಿತವನ್ನು ಹೊಂದಿವೆ. ಯಡಿಯೂರಪ್ಪ ಸಂಪುಟಕ್ಕೆ ಉಮೇಶ್ ಕತ್ತಿ ಅವರು ಸಹ ಶೀಘ್ರದಲ್ಲಿಯೇ ಸೇರ್ಪಡೆಗೊಳ್ಳಲಿದ್ದಾರೆ.