ಸಚಿವ ಸ್ಥಾನ ಸಿಗದ ಸೇಡು ತೀರಿಸಿಕೊಂಡ ರಮೇಶ್ ಜಾರಕಿಹೊಳಿ!
ಬೆಳಗಾವಿ, ಡಿಸೆಂಬರ್ 14; ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 12 ಸ್ಥಾನಗಳಲ್ಲಿ ಗೆದ್ದು ಬೀಗಿರುವ ಬಿಜೆಪಿಗೆ ಬೆಳಗಾವಿಯಲ್ಲಿ ಮುಖಭಂಗವಾಗಿದೆ. ಹಾಲಿ ಪರಿಷತ್ ಸದಸ್ಯರಿಗೆ ಟಿಕೆಟ್ ಕೊಟ್ಟರೂ ಸೋಲು ಅನುಭವಿಸುವಂತಾಗಿದೆ. ಜಾರಕಿಹೊಳಿ ಬ್ರದರ್ಸ್ ಚಾಣಾಕ್ಯ ನಡೆ ಪಕ್ಷಕ್ಕೆ ಸೋಲು ತಂದಿದೆ.
ಬೆಳಗಾವಿ ದ್ವಿ-ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ನ ಚನ್ನರಾಜ ಬಸವರಾಜ ಹಟ್ಟಿಹೊಳಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಬಸವರಾಜ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಮೊದಲ ಪ್ರಾಶಸ್ತ್ಯದ 3715 ಮತಗಳನ್ನು ಪಡೆದು ಬಿಜೆಪಿಯ ಹಾಲಿ ಪರಿಷತ್ ಸದಸ್ಯರಾಗಿದ್ದ ಮಹಾಂತೇಶ ಕವಟಗಿಮಠರನ್ನು ಸೋಲಿಸಿದರು.
ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾರು, ಏನು ಹೇಳಿದರು?
ಮೊದಲ ಪ್ರಾಶಸ್ತ್ಯದ ಮತಗಳಲ್ಲಿ 2526 ಮತಗಳನ್ನು ಪಡೆದು 2ನೇ ಸ್ಥಾನಗಳಿದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದರು. 2454 ಮತಗಳನ್ನು ಪಡೆದ ಮಹಾಂತೇಶ ಕವಟಗಿಮಠ ಸೋಲು ಅನುಭವಿಸಿದರು. ಈ ಮೂಲಕ ಬಿಜೆಪಿಗೆ ಬೆಳಗಾವಿಯಲ್ಲಿ ಸೋಲು ಉಂಟಾಯಿತು..
ಬೆಳಗಾವಿ ಪರಿಷತ್ ಫಲಿತಾಂಶ: ಬಿಜೆಪಿಗೆ ಮುಖಭಂಗ; ಗೆದ್ದವರಾರು?
ಸೇಡು ತೀರಿಸಿಕೊಂಡ ರಮೇಶ್ ಜಾರಕಿಹೊಳಿ
ವಿಧಾನ ಪರಿಷತ್ ಚುನಾವಣೆ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮತ್ತೊಂದು ಕಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಿತ್ತು. ಚನ್ನರಾಜ ಬಸವರಾಜ ಹಟ್ಟಿಹೊಳಿ ಗೆಲ್ಲುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಗೆದ್ದು ಬೀಗಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋತರೂ ಸಹ ರಮೇಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡಂತೆ ಆಗಿದೆ.
ಕೈ ತಪ್ಪಿದ್ದ ಸಚಿವ ಸ್ಥಾನ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾಗಿದ್ದವರು ರಮೇಶ್ ಜಾರಕಿಹೊಳಿ. ಯಡಿಯೂರಪ್ಪ ಸಂಪುಟದಲ್ಲಿ ಪ್ರಭಾವಿ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದರು. ಆದರೆ ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾಗಿ, ಹೊಸ ಸಂಪುಟ ರಚನೆಗೊಂಡರೂ ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನ ಸಿಗಲಿಲ್ಲ. ಸಚಿವ ಸ್ಥಾನಕ್ಕಾಗಿ ದೆಹಲಿಯ ಮಟ್ಟದಲ್ಲೂ ಪ್ರಯತ್ನ ನಡೆಸಿದ್ದ ಅವರಿಗೆ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳಲು ಪರಿಷತ್ ಚುನಾವಣೆ ವೇದಿಕೆ ಆಯಿತು.
ಟಿಕೆಟ್ ಕೇಳಿದ್ದ ಜಾರಕಿಹೊಳಿ ಕುಟುಂಬ
25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಾರಕಿಹೊಳಿ ಕುಟುಂಬ ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು. ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ಹೊಣೆ ನಮ್ಮದು ಎಂದು ಹೇಳಿದ್ದರು. ಆದರೆ ಪಕ್ಷ ಹಾಲಿ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠಗೆ ಟಿಕೆಟ್ ನೀಡಿತು. ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಲು ಕೊನೆ ದಿನ ಇರುವಾಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ರಮೇಶ್ ಜಾರಕಿಹೊಳಿ, ಅವರ ಅಳಿಯ ಮತ್ತು ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಲಖನ್ ಬೆಂಬಲಕ್ಕೆ ನಿಂತರು. ಚುನವಣೆಯಲ್ಲಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.
ಮತ ವಿಭಜನೆ ಆಗಿದೆ. ಪ್ರಯತ್ನ ವಿಫಲವಾಗಿಲ್ಲ
ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ, "ಈ ಚುನಾವಣೆಯಲ್ಲಿ ಬಿಜೆಪಿ ಸಂಘಟಿತ ಪ್ರಯತ್ನ ಮಾಡಿದೆ. ನಾನು ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಲು ಆಗಲಿಲ್ಲ. ನಮ್ಮ ಮತಗಳು ವಿಭಜನೆಯಾಗಿವೆ. ನಮ್ಮ ಪ್ರಯತ್ನ ವಿಫಲವಾಗಿಲ್ಲ. ಅಧಿಕೃತ ಅಭ್ಯರ್ಥಿ ಇದ್ದಾಗ ಇನ್ನೊಬ್ಬ ಅಭ್ಯರ್ಥಿ ಹಾಕುವ ಅಗತ್ಯ ಇರಲಿಲ್ಲ" ಎಂದು ಹೇಳಿದ್ದಾರೆ.