ಸುರೇಶ್ ಅಂಗಡಿಯವರನ್ನು ಕೋವಿಡ್ ಬಲಿ ಪಡೆದಿದ್ದು ದುರಾದೃಷ್ಟ: ಶೆಟ್ಟರ್
ಬೆಳಗಾವಿ, ಏಪ್ರಿಲ್ 12: ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಕೋವಿಡ್19 ಹಾವಳಿಯಲ್ಲಿ ನೊಂದ ಜನಸಾಮಾನ್ಯರಿಗೆ ನೆರವು ನೀಡಿ, ಜನರ ಕಣ್ಣೀರು ಒರೆಸಿದ್ದ ಸುರೇಶ್ ಅಂಗಡಿಯವರನ್ನೇ ಕೋವಿಡ್ ಬಲಿ ಪಡೆದಿದ್ದು ದುರಾದೃಷ್ಟಕರ ಎಂದು ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಷಾದ ವ್ಯಕ್ತಪಡಿಸಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗಣೇಶಪುರ, ಬಾಳೆಕುಂದ್ರಿ ಕೆ.ಎಚ್, ಹಲಗಾ ಗ್ರಾಮಗಳಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಸಭೆಯಲ್ಲಿ ಮಾತನಾಡಿ, ಬೆಳಗಾವಿಯು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸುರೇಶ್ ಅಂಗಡಿ ಅವರ ಕೊಡುಗೆ ಅಪಾರವಾಗಿದ್ದು, ಬಿಜೆಪಿಗೆ ಮತ ನೀಡಲು ಸಚಿವ ಶೆಟ್ಟರ್ ವಿನಂತಿಸಿದರು.
ಅಂದು ಅನಂತ್ ಕುಮಾರ್ ಪತ್ನಿಗೆ ಒಂದು ನ್ಯಾಯ, ಇಂದು ಸುರೇಶ್ ಅಂಗಡಿ ಪತ್ನಿಗೆ ಇನ್ನೊಂದು ನ್ಯಾಯ!
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ದಿ.ಸುರೇಶ್ ಅಂಗಡಿಯವರು ಮಾಡಿದ ಅಭಿವೃದ್ಧಿಪರ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಆ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಮಂಗಲ ಸುರೇಶ್ ಅಂಗಡಿ ಅವರನ್ನು ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ಆಯ್ಕೆ ಮಾಡಬೇಕೆಂದು ವಿನಂತಿಸಿದರು.
ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಮಾತನಾಡಿ, ಬೆಳಗಾವಿಗೆ ಸುವರ್ಣ ಸೌಧ, ಬೆಳಗಾವಿ ರೈಲ್ವೆ ಯೋಜನೆ, ವಿಶ್ವವಿದ್ಯಾಲಯಗಳಂತಹ ಹತ್ತು ಹಲವಾರು ಮಹತ್ತರ ಕಾರ್ಯಗಳನ್ನು ಬೆಳಗಾವಿಗೆ ತಂದಿದ್ದಾರೆ. ಇಂತಹ ಅಭಿವೃದ್ಧಿಪರ ಕಾರ್ಯಗಳನ್ನು ನೋಡಿ ಬಿಜೆಪಿಗೆ ಮತ ನೀಡಬೇಕೆಂದರು.
ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾ ಸಾಹೇಬ್ ಜೊಲ್ಲೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜನಪರವಾದ ಸಾಕಷ್ಟು ಕಾರ್ಯಗಳು ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿದ್ದು, ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಮಂಗಲ ಅಂಗಡಿಯವರನ್ನು ಹೆಚ್ಚಿನ ಅಂತರದಿಂದ ಗೆಲವು ನಿಶ್ಚಿತ ಎಂದರು. ಮಾಜಿ ಸಂಸದ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಹಾಗೂ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.