ಯುವ ಜನಾಂಗ: ದೇಶದ ಆಶಯ ಅಭಿವೃದ್ಧಿಗೆ ತಳಹದಿ
ಬೆಳಗಾವಿ, ಜನವರಿ 09: ಭಾರತ ತನ್ನ ಅಭಿವೃದ್ಧಿ ಜತೆಗೆ ಜಗತ್ತಿನ ಅವಶ್ಯಕತೆಗೆ ಯುವ ಸಂಪನ್ಮೂಲ ಬಳಸಬೇಕು ಎಂದು ಎಐಸಿಟಿಇ ಮುಖ್ಯಸ್ಥ ಪ್ರೊ. ಅನಿಲ್ ಡಿ. ಸಹಸ್ರಬುದ್ಧೆ ಅಭಿಪ್ರಾಯಪಟ್ಟರು.
ವಿಟಿಯು 17 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಗೌರವ ಡಾಕ್ಟರ್ ಆಫ್ ಸೈನ್ಸ್ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ಶೇ.25 ಷ್ಟು 25 ರೊಳಗಿನವರು ಇದ್ದಾರೆ. ಭಾರತವು ಅಭಿವೃದ್ಧಿ ಜತೆಗೆ ಜಗತ್ತಿನ ಅವಶ್ಯಕತೆ ಪೂರೈಸಲು ಯುವ ಸಂಪನ್ಮೂಲ ಬಳಕೆ ಮಾಡಬೇಕಿದೆ ಎಂದರು.
ಸರ್ವೇ ಜನಾಃ ಸುಖಿನೋ ಭವಂತು ಎಂಬ ಆಶಯದಂತೆ ಇಂದಿನ ಯುವ ಜನಾಂಗ ನಡೆದುಕೊಳ್ಳಬೇಕು. 6ನೇ ಶತಮಾನದ ತೈತ್ರೀಯ ಉಪನಿಷತ್ ಪದವಿ ಹೊಂದಿದ ವಿದ್ಯಾರ್ಥಿಗಳ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಬಹಳ ಹಿಂದೆಯೇ ಹೇಳಿದೆ. ಸತ್ಯ, ಧರ್ಮ, ಸಂಸ್ಕಾರ, ಪರಸ್ಪರರ ಬಗ್ಗೆ ಗೌರವ, ಸ್ವ ಆರೋಗ್ಯ ಕಾಳಜಿ ಇಂದಿನ ಅಗತ್ಯಗಳಲ್ಲಿ ಒಂದು ಎಂದರು.
ಸ್ಕಿಲ್ ಇಂಡಿಯಾ, ಕ್ಲೀನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಇಂಡಿಯಾ, ಉನ್ನತ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ ಸೇರಿ ಇತರ ಕಾರ್ಯಕ್ರಮಗಳು ಯುವ ಜನತೆಯ ಮೇಲೆ ವಿಶ್ವಾಸವಿಟ್ಟು ಸರ್ಕಾರಗಳು ನೀಡಿದ ಕಾರ್ಯಕ್ರಮಗಳಾಗಿವೆ. ಇವುಗಳಿಗೆ ಯಶಸ್ಸು ದೊರೆಯಬೇಕು ಎಂದು ಹೇಳಿದರು.