ರೈತರ ತೀವ್ರ ವಿರೋಧ ನಡುವೆ ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ಆರಂಭ
ಬೆಳಗಾವಿ ನವೆಂಬರ್ 12: 'ಉಳುವವನೇ ಹೊಲದ ಒಡೆಯ' ಎನ್ನುವ ಘೋಷವಾಕ್ಯದೊಂದಿಗೆ ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ರೈತರ ಮತ ಪಡೆದುಕೊಳ್ಳುವ ಜನನಾಯಕರು ಬೆಳಗಾವಿ ಬೈಪಾಸ್ ರಸ್ತೆ ಕಾಮಗಾರಿ ವಿಚಾರದಲ್ಲಿ ಕಣ್ಣಿದ್ದು ಕುರುಡಾಗಿದ್ದಾರೆ. ಬೆಳಗಾವಿ ಮಚ್ಛೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ವಿಚಾರದಲ್ಲಿ ದುಡ್ಡು ಅಧಿಕಾರವಿದ್ದವನೇ ಒಡೆಯನಾಗಿದ್ದಾನೆ. ರೈತರ ತೀವ್ರ ವಿರೋಧದ ನಡುವೆಯೂ ಮಚ್ಛೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಹಲವಾರು ತಿಂಗಳುಗಳಿಂದ ರಸ್ತೆ ಕಾಮಗಾರಿಗೆ ಮಚ್ಚೆ ರೈತರು ವಿರೋಧ ವ್ಯಕ್ತಪಡಿಸಿದರೂ ಜನನಾಯಕರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ರೈತರ ಕೂಗಿಗೆ ಕಿವಿಗೊಡುತ್ತಿಲ್ಲ. ಬದಲಿಗೆ ಅವರನ್ನು ಅಮಾನವೀಯವಾಗಿ ಪೊಲೀಸರ್ ಠಾಣೆಗೆ ಎಳೆದೊಯ್ದು ದುರ್ವರ್ತನೆ ತೋರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, "ನಿನ್ನೆ ರೈತರ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ. ಇಂದು ಕಾಮಗಾರಿ ಆರಂಭಿಸಿದ್ದೇವೆ. ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸುವುದಿಲ್ಲ. ಇನ್ನು ಈಗಾಗಲೇ 825 ರೈತರಿಗೆ 27 ಕೋಟಿಗೂ ಅಧಿಕ ಪರಿಹಾರ ಕೊಟ್ಟಿದ್ದೇವೆ. ಇನ್ನೂ 155 ರೈತರಿಗೆ ಪರಿಹಾರ ಕೊಡಬೇಕಿದೆ ಕೆಲವರು ಪರಿಹಾರ ಹಣ ಕಡಿಮೆ ಇದೆ ಎಂದಿದ್ದಾರೆ. ಮತ್ತೆ ಕೆಲವರು ಜಮೀನು ಕೊಡುವುದಿಲ್ಲ ಎಂದಿದ್ದಾರೆ. ಪರಿಹಾರ ಹೆಚ್ಚಿಗೆ ಬೇಕಾಗಿದ್ದವರಿಗೆ ಹೆಚ್ಚಿನ ಪರಿಹಾರ ಕೊಡಲಿದ್ದೇವೆ. ಇನ್ನು ಗುಂಟೆ ಲೆಕ್ಕದಲ್ಲಿ ಜಮೀನು ಕಳೆದುಕೊಳ್ಳುವವರಿಗೆ ಪರ್ಯಾಯ ಜಮೀನು ಕೊಡಿಸಲು ಅವಕಾಶವಿದೆ" ಎಂದು ಹೇಳಿದ್ದಾರೆ. ಇನ್ನೂ ನಿನ್ನೆ ಘಟನೆಯ ಬಗ್ಗೆ ಮಾತನಾಡಿದ ಅವರು,"ನಾವು ಯಾವುದೇ ರೀತಿಯಲ್ಲಿ ದಬ್ಬಾಳಿಕೆ, ದೌರ್ಜನ್ಯ ರೈತರ ಮೇಲೆ ಮಾಡುತ್ತಿಲ್ಲ. ರೈತರಿಗೆ ನ್ಯಾಯ ಒದಗಿಸುವ ಕೆಲಸ ನಾನು ಮಾಡುವೆ. ಬೆಳೆ ಹಾನಿಯಾಗದಂತೆ ನಾವು ಅಗತ್ಯ ಕ್ರಮಕೈಗೊಳ್ಳುತ್ತೇವೆ. ಆತ್ಮಹತ್ಯೆ ಯತ್ನಿಸಿದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆತನ ಆರೋಗ್ಯದಲ್ಲಿ ಸ್ಥಿರತೆಯಿದೆ. ಆತನಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗುವುದು" ಎಂದಿದ್ದಾರೆ.
ಆದರೆ ರೈತರು ಸರಕಾರ ಮತ್ತು ಅಧಿಕಾರಿಗಳು ರೈತರಿಗೆ ಮೋಸ ಮಾಡಿ ರೈತರ ಕಣ್ತಪ್ಪಿಸಿ ಫಲವತ್ತಾದ ಭೂಮಿಯನ್ನು ಕಾಮಗಾರಿಗೆ ಸ್ವಾಧೀನ ಮಾಡಿಕೊಂಡಿದ್ದಾರೆ. ಹೀಗಾಗಿ ತಾವು ಪ್ರಾಣ ಹೋದರೂ ರಸ್ತೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದ್ದಿದ್ದಾರೆ. ನಿನ್ನೆ ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ್ದ ರೈತರು ಮತ್ತು ಪೊಲೀಸರು ನಡುವೆ ವಾಕ್ಸಮರ ನಡೆದಿದೆ. ಪರಸ್ಪರ ವಾಗ್ದಾಳಿ ಬಳಿಕ ವಾಗ್ವಾದ ವಿಕೋಪಕ್ಕೆ ತಿರುಗಿ ಎಳೆದಾಟ ನೂಕಾಟ ಮಾಡಲಾಗಿದೆ. ಈ ಸಮಯದಲ್ಲಿ ಪೊಲೀಸರು ಮಹಿಳೆಯರನ್ನು ಎಳೆದಾಡಿ ಸೀರೆ ಹರಿದು ಅಮಾನವೀಯವಾಗಿ ವರ್ತಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ. ಪೊಲೀಸರ ದುರ್ವರ್ತನೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿ ಹಚ್ಚಿಕೊಂಡು ಜಮೀನು ಮಾಲೀಕನೊಬ್ಬ ಆತ್ಮಹತ್ಯೆಗೂ ಯತ್ನಿಸಿದರೆ ಮತ್ತೋರ್ವ ಕುಡುಗೋಲಿನಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸ್ಥಳದಲ್ಲಿ ನಡೆದಿದೆ.
ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿರುವ ರೈತರು
ಈವರೆಗೆ ಸರ್ವೆಯಲ್ಲಿ ತಮ್ಮ ಜಮೀನು ಇರಲಿಲ್ಲ. ಏಕಾಏಕಿ ತಮ್ಮ ಜಮೀನನ್ನು ರಸ್ತೆ ಕಾಮಗಾರಿಯಲ್ಲಿ ಸೇರಿಕೊಂಡಿದೆ ಎಂದು ಆರೋಪಿಸಿ ರೈತರು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನೂರಾರು ಪೊಲೀಸರನ್ನು ಕರೆತಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿನ್ನೆ ಕಾಮಗಾರಿ ನಡೆಸಿತ್ತು. ಆದರೆ ರೈತರು ಕಾಮಗಾರಿಗೆ ಅಡ್ಡಿಪಡಿಸಿ ಆಕ್ರೋಶ ಹೊರಹಾಕಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಪುಟ್ಟ ಮಕ್ಕಳೊಂದಿಗೆ ಬಂದ ಮಹಿಳೆಯರನ್ನು ಪೊಲೀಸರು ಎಳೆದಾಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ರೈತ ಮಹಿಳೆಯರನ್ನು ಎಳೆದಾಡಿ ಸೀರೆ ಹರಿದು ಹಾಕಿದ ಘಟನೆ ನಡೆದಿದೆ. ಪೊಲೀಸರ ಎಳೆದಾಟದಿಂದ ಮನನೊಂದು ಕಣ್ಣೀರಿಟ್ಟ ರೈತ ಮಹಿಳೆಯರು ಹರಿದ ಸೀರೆಯನ್ನು ತೋರಿಸುತ್ತಿರುವ ದೃಶ್ಯ ಕಂಡುಬಂತು. ಘಟನೆಯಲ್ಲಿ ಪೊಲೀಸ್ ಹಾಗೂ ರೈತರ ನಡುವೆ ವಾಗ್ವಾದ ನಡೆದು ಹದಿನೈದಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ರೈತರನ್ನು ವಶಕ್ಕೆ ಪಡೆದ ಪೊಲೀಸರು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದರು. ಪೊಲೀಸ್ ದೌರ್ಜನ್ಯಕ್ಕೆ ಮಹಿಳೆಯರು ಅಸಾಯಕರಾಗಿ ಕಣ್ಣೀರಿಟ್ಟಿದ್ದಾರೆ. ಜೊತೆಗೆ ಪೊಲೀಸ್ ಹಾಗೂ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
''ವರ್ಷಕ್ಕೆ ಮೂರು ಬೆಳೆ ನೀಡುವ ಭೂಮಿ ಮೇಲೆ ಸರ್ಕಾರದ ಮೇಲೆ ಕಣ್ಣು ಬಿದ್ದಿದೆ. ಇದು ರೈತರಗೆ ಮಾಡುತ್ತಿರುವ ದೊಡ್ಡ ಮೋಸ. ರೈತರ ಕಣ್ತಪ್ಪಿಸಿ ಜಮೀನು ಪಡೆದು, ಜಮೀನು ಖರೀದಿ ಹಣದಲ್ಲೂ ಮೋಸ ಮಾಡಲಾಗುತ್ತಿದೆ. ಪ್ರಾಣ ಹೋದರೂ ನಾವು ಜಮೀನು ಬಿಟ್ಟುಕೊಡುವುದಿಲ್ಲ. ರೈತ ಪರ ಆಡಳಿತ ಮಾಡುವ ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಬೇಕು,'' ಎಂದು ರೈತರು ಮನವಿ ಮಾಡಿದ್ದಾರೆ.
ಈ ಹಿಂದೆ ಬೆಳಗಾವಿಯ ಹಲಗಾ-ಮಚ್ಚೆ ಗ್ರಾಮದ ರೈತರು, ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ಸರಕಾರ ಮತ್ತು ಅಧಿಕಾರಿಗಳು ರೈತರಿಗೆ ಮೋಸ ಮಾಡಿ ರೈತರ ಕಣ್ತಪ್ಪಿಸಿ ಫಲವತ್ತಾದ ಭೂಮಿಯನ್ನು ಕಾಮಗಾರಿಗೆ ಸ್ವಾಧೀನ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಮಚ್ಚೆ ಬೈಪಾಸ್ ಕಾಮಗಾರಿಗಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಪರಿಹಾರ ನೀಡಲು ಅಧಿಕಾರಿಗಳು ಕಮೀಷನ್ ಕೇಳುತ್ತಿದ್ದಾರೆನ್ನುವ ಗಂಭೀರ ಆರೋಪವನ್ನು ಮಾಡಲಾಗಿತ್ತು. ಭೂಮಿ ಕಳೆದುಕೊಂಡ ತಮಗೆ ಪರಿಹಾರ ನೀಡಲು ಅಧಿಕಾರಿಗಳು ಲಕ್ಷಾಂತರ ರೂ. ಕಮೀಷನ್ ಕೇಳುತ್ತಿರೋದಾಗಿ ಜಿಲ್ಲಾಧಿಕಾರಿಗಳ ಮುಂದೆ ರೈತರು ತಮ್ಮ ಅಳಲು ತೊಡಿಕೊಂಡಿದ್ದರು. ವಶಪಡಿಸಿಕೊಳ್ಳಲಾದ ರೈತರ ಭೂಮಿಗೆ 57 ಲಕ್ಷ ರೂ. ಪರಿಹಾರ ನೀಡಲು 11 ಲಕ್ಷ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ಸಮ್ಮುಖದಲ್ಲೇ ಸಂತ್ರಸ್ತ ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಆಗಲೂ ಭೂಮಿ ಕಳೆದುಕೊಂಡ ಎರಡೂ ಗ್ರಾಮಗಳ ನೂರಾರು ರೈತರು ಮತ್ತು ರೈತ ಮಹಿಳೆಯರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎದುರು ತಮಗಾದ ಅನ್ಯಾಯದ ಬಗ್ಗೆ ವಿವರಿಸಿದ ಬಳಿಕ ಜಿಲ್ಲಾಧಿಕಾರಿಗಳು ಕಾಮಗಾರಿಗಾಗಿ ಭೂಸ್ವಾಧೀನ ಮಾಡಿಕೊಂಡಿರುವ ಪ್ರತಿ ಜಮೀನಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ದೂರಿನ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈಗಲೂ ಜಿಲ್ಲಾಧಿಕಾರಿ ರೈತರಿಗೆ ಮೋಸ ಮಾಡುವುದಿಲ್ಲ ಎನ್ನುವ ಮಾತನ್ನೇ ಹೇಳುತ್ತಿದ್ದಾರೆ. ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದ ಜನನಾಯಕರಿಗೇ ರೈತರ ಅಳಲು ಕಾಣಿಸುತ್ತಿಲ್ಲವಾಗಿರುವಾಗ ಇನ್ನೂ ಜಿಲ್ಲಾಧಿಕಾರಿ ಅದ್ಯಾವ ರೀತಿ ನ್ಯಾಯ ಕೊಡಿಸುತ್ತಾರೋ ಗೊತ್ತಿಲ್ಲ. ಅಷ್ಟಕ್ಕೂ ಜಿಲ್ಲಾಧಿಕಾರಿ ಈ ಹಿಂದೆ ಕಮಿಷನ್ ಕೇಳಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳು ಅದ್ಯಾರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೋ ಭಗವಂತನೇ ಬಲ್ಲ. ಇಂಥವರನ್ನು ನಂಬಿಕೊಂಡು ಅದ್ಯಾವ ಆಧಾರದ ಮೇಲೆ ರೈತರು ಜಮೀನಿಗೆ ಪರಿಹಾರ ನಿರೀಕ್ಷಿಸಬೇಕೋ? ಫಲವತ್ತಾದ ಭೂಮಿಯನ್ನು ಬಿಟ್ಟುಕೊಡಬೇಕೋ? ರೈತರಿಗೆ ತಿಳಿಯದಂತಾಗಿದೆ.