ನಿಮಗೆ ದ್ರೋಹ ಮಾಡಿದ ದಿನ ರಾಜಕಾರಣದಲ್ಲೇ ಇರಲ್ಲ; ರಮೇಶ್ ಜಾರಕಿಹೊಳಿ
ಬೆಳಗಾವಿ, ಸೆಪ್ಟೆಂಬರ್ 6: "ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಪರ ನಾನು ದೆಹಲಿಗೆ ಹೋಗಿದ್ದೆ. ಆ ಸಂದರ್ಭ ನಾನು ಕ್ಷೇತ್ರದಲ್ಲಿರಲಿಲ್ಲ. ಆದರೆ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ" ಎಂದು ಹೇಳಿಕೊಂಡರು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ.
ಗೋಕಾಕ್ ನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, "ನಾನು ಪ್ರವಾಹ ಬಂದಾಗ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೆಲ ಮಾಧ್ಯಮಗಳು ನನ್ನ ವಿರುದ್ಧ ಅಪಪ್ರಚಾರ ಮಾಡಿವೆ. ನಾನು ಹಣಕ್ಕಾಗಿ ಹೋಗಿಲ್ಲ. ನನಗೆ ಅನ್ಯಾಯ ಆಗಿದೆ. ಆದ್ದರಿಂದ ನಾನು, ಮಹೇಶ ಕುಮಟೊಳ್ಳಿ ಈ ನಿರ್ಧಾರ ತೆಗೆದುಕೊಂಡೆವು. ಸಮ್ಮಿಶ್ರ ಸರ್ಕಾರದ ಆಂತರಿಕ ವ್ಯವಸ್ಥೆಗೆ ಹೆದರಿ ಈ ನಿರ್ಧಾರ ಮಾಡಿದೆವು. ಸಿದ್ದರಾಮಯ್ಯ, ಖರ್ಗೆ ಇದ್ದರೂ ನನಗೆ ನ್ಯಾಯ ಸಿಗಲಿಲ್ಲ. ನನ್ನೊಂದಿಗೆ ಇನ್ನೂ 10 ಶಾಸಕರು ಇದ್ದಾರೆ" ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನಕ್ಕಾಗಿ ಸಂಕಲ್ಪ ಸಮಾವೇಶ!
ಸ್ಪೀಕರ್ ರಮೇಶ ಕುಮಾರ್ ಅವರು ಅನರ್ಹತೆಗೊಳಿಸಿದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಲೇ, "ಅನರ್ಹತೆ ಮಾಡಿದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅದಕ್ಕೆ ಅವಕಾಶವಿದೆ. ಹೆದರಬೇಕಿಲ್ಲ. ಹಾಗೆಯೇ, ನಿಮಗೆ ದ್ರೋಹ ಮಾಡಿದ ದಿನ ನಾನು ರಾಜಕಾರಣದಲ್ಲೇ ಇರುವುದಿಲ್ಲ" ಎಂದರು.
"ಸತೀಶ್ ಜಾರಕಿಹೊಳಿ ಯಮಕನಮರಡಿಯಲ್ಲಿ 1000 ಸಾವಿರ ಎಕರೆ ಲೂಟಿ ಮಾಡಿದ್ದಾನೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನನಗೆ ಲಖನ್ ಗೆ ಜಗಳ ತಂದಿಡುತ್ತಿದ್ದಾನೆ. ನಾನು ಲಖನ್ ಗೆ ಗೋಕಾಕ ಮತಕ್ಷೇತ್ರ ಬಿಟ್ಟುಕೊಡ್ತಿನಿ. ಈ ಬಾರಿ ಇಲ್ಲಿ ಸ್ಪರ್ಧಿಸಿ ಮುಂದೆ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ" ಎಂದು ಸವಾಲು ಹಾಕಿದರು.