ವಿಚ್ಛೇದನ ಅರ್ಜಿ ವಾಪಸ್ ಪಡೆಯುತ್ತೇನೆ; ಕಲ್ಯಾಣ್ ಪತ್ನಿ ಅಶ್ವಿನಿ
ಬೆಳಗಾವಿ, ಅಕ್ಟೋಬರ್ 12: ಚಿತ್ರಸಾಹಿತಿ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಪ್ರಕರಣವು ಸುಖಾಂತ್ಯ ಕಂಡಿದೆ. ತಾವು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುವುದಾಗಿ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ತಿಳಿಸಿದ್ದಾರೆ.
"ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ. ಮುಂದೆಯೂ ಕೆ.ಕಲ್ಯಾಣ ಅವರ ಜತೆ ಚೆನ್ನಾಗಿ ಬದುಕುತ್ತೇನೆ" ಎಂದು ಅಶ್ವಿನಿ ಹೇಳಿದ್ದಾರೆ.
ಕೆ.ಕಲ್ಯಾಣ್ ಪತ್ನಿಯಿಂದ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದ ಶಿವಾನಂದ್ ವಾಲಿ
ಇಂದು ಬೆಳಗಾವಿಯಲ್ಲಿಮಾತನಾಡಿದ ಅವರು, ಶೀಘ್ರವೇ ಪತಿ ಕೆ.ಕಲ್ಯಾಣ ಅವರನ್ನು ಭೇಟಿ ಮಾಡಿ, ನಾವಿಬ್ಬರೂ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಕುಟುಂಬದಲ್ಲಿ ನಡೆದ ಕೆಟ್ಟ ಗಳಿಗೆ ಇದು. ಶಿವಾನಂದ ವಾಲಿಯನ್ನು ನಾವು ತುಂಬಾ ನಂಬಿದ್ದೆವು. ಆದರೆ ನಮಗೆ ನಂಬಿಕೆ ದ್ರೋಹ ಮಾಡಿದ್ದಾನೆ. ನಾವು ಅವರ ಮಾತನ್ನ ಕೇಳಬೇಕು, ಹೇಳಿದ್ದನ್ನು ಮಾಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ಎಲ್ಲದರ ಬಗ್ಗೆ ಕಲ್ಯಾಣ ಅವರನ್ನು ಸದ್ಯದ್ರಲ್ಲೇ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಜೀವನವನ್ನು ಅವರೊಂದಿಗೆ ಕಳೆಯುತ್ತೇನೆ. ನ್ಯಾಯಾಲಯಕ್ಕೆ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ. ಈ ಕುರಿತು ಕೆಲವೊಂದಿಷ್ಟು ದಾಖಲೆ ಪತ್ರಗಳಿಗೆ ಈಗಾಗಲೇ ಸಹಿ ಮಾಡಿದ್ದೇನೆ ಎಂದು ತಿಳಿಸಿದರು.
ನಮ್ಮ ಕುಟುಂಬ ಯಾವುದೋ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಇದೀಗ ಅದರಿಂದ ಹೊರಬಂದಿದ್ದೇವೆ. ಇದಕ್ಕೆ ಕಾರಣರಾದ ಬೆಳಗಾವಿ ಪೊಲೀಸರಿಗೆ ಕೃತಜ್ಞತೆ ತಿಳಿಸುತ್ತೇನೆ. ಕಾನೂನು ಹಾಗೂ ಪೊಲೀಸರಿಂದ ನಮಗೆ ಸಹಾಯ ದೊರಕಿದೆ ಎಂದು ಪೊಲೀಸರ ಕಾರ್ಯವನ್ನು ಸ್ಮರಿಸಿದರು. ಮನೆಗೆಲಸಕ್ಕೆ ಬರುವವರ ವೈಯಕ್ತಿಕ ಹಿನ್ನೆಲೆ ತಿಳಿದುಕೊಳ್ಳಿ. ಆನಂತರವೇ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಸಲಹೆಯನ್ನೂ ನೀಡಿದರು.