ಪಕ್ಷಕ್ಕಾಗಿ ಇನ್ನೂ 10 ವರ್ಷ 24 ಗಂಟೆ ದುಡಿಯಲು ಸಿದ್ದ; ಯಡಿಯೂರಪ್ಪ
ಬೆಳಗಾವಿ, ಜೂನ್ 7: ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, "ವಾಯುವ್ಯ ಕ್ಷೇತ್ರಗಳಲ್ಲಿ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಗೆಲ್ಲುತ್ತಾರೆ, ರಾಜ್ಯಸಭೆಯಲ್ಲೂ ಕೂಡ ಲೆಹರ್ ಸಿಂಗ್ ಸೇರಿ ಮೂರು ಸ್ಥಾನಗಳಲ್ಲೂ ನಾವೇ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಮಾದರಿಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, "ಆ ವಿಚಾರದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಪಕ್ಷ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ನೋಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಯಾವ ರೀತಿ ನಿರ್ದೇಶನ ನೀಡುತ್ತಾರೋ? ಆ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತದೆ" ಎಂದು ತಿಳಿಸಿದರು.
"ನರೇಂದ್ರ ಮೋದಿ ಹೆಸರು ನಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮೋದಿ ಆಡಳಿತವನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಖಂಡಿತ ಮುಂಬರುವ ಎಲ್ಲಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 140ರಿಂದ 150 ಸ್ಥಾನಗಳಲ್ಲಿ ನಾವು ಗೆಲ್ಲಲ್ಲಿದ್ದೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ತರುವುದಕ್ಕೆ ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ" ಎಂದರು.
ಚುನಾವಣೆ ನೇತೃತ್ವದ ಪ್ರಶ್ನೆ ಇಲ್ಲ; ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನೇತೃತ್ವವಹಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, "ಒಬ್ಬರದೇ ನೇತೃತ್ವ ಇರುವುದಿಲ್ಲ, ಬಿಜೆಪಿ ಸಾಮೂಹಿಕ ನೇತೃತ್ವದಲ್ಲಿ ಮುನ್ನಡೆಯುತ್ತದೆ. ಮತದಾರರು ಮೋದಿ ಮತ್ತು ಬಿಜೆಪಿ ಜೊತೆಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಯಾವುದೇ ಅಡ್ಡಿ ಆತಂಕ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ರಾಜ್ಯದಲ್ಲಿ ಎಲ್ಲಿ ಯಾವಾಗ ಕರೆದರೂ ಪಕ್ಷಕ್ಕಾಗಿ 24 ಗಂಟೆ ಪ್ರವಾಸ ಮಾಡಲು ಸಿದ್ಧನಿದ್ದೇನೆ. ಇನ್ನು 10 ವರ್ಷಗಳ ಕಾಲ ನಾನು ರಾಜ್ಯ ಪ್ರವಾಸ ಮಾಡುವ ಹಾಗೆ ಇದ್ದೇನೆ. ಕಾರ್ಯಕರ್ತರಿಗೆ ನೋವಾಗುವ ಪ್ರಶ್ನೆ ಉದ್ಭವಿಸಲ್ಲ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲಪಡಿಸಲು ಪ್ರಯತ್ನಿಸುತ್ತೇನೆ" ಎಂದು ಹೇಳಿದರು.
ಸಿದ್ದರಾಮಯ್ಯ ಹತಾಷರಾಗಿದ್ದಾರೆ; ಕೋಮುವಾದಿ ಬಿಜೆಪಿಯನ್ನು ದೂರವಿಡುವ ಸಲುವಾಗಿ ಜೆಡಿಎಸ್ನವರು ನಮಗೆ ಬೆಂಬಲಿಸಬೇಕಾಗಿತ್ತು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, "ಸಿದ್ಧರಾಮಯ್ಯ ಮನಬಂದಂತೆ ಮಾತನಾಡುತ್ತಾರೆ, ಅವರು ಡೆಸ್ಪರೇಟ್ ಆಗಿದ್ದಾರೆ. ಚುನಾವಣೆಯಲ್ಲಿ ಸೋಲು ನಿಶ್ಚಿತ ಅಂತ ಗೊತ್ತಿರುವುದರಿಂದ ಹಗುರುವಾಗಿ ಮಾತನಾಡುತ್ತಾರೆ, ಆರ್ಎಸ್ಎಸ್ ಬಗ್ಗೆ, ಬೇರೆ ಬೇರೆ ವಿಚಾರಗಳ ಬಗ್ಗೆ ಹಗುರುವಾಗಿ ಮಾತನಾಡುತ್ತಾರೆ, ಇದು ಅವರ ಚಟ. ಆದರೆ ಇದರಿಂದ ಅವರಿಗೆ ಏನೂ ಲಾಭವಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕರಿಗುವ ಗೌರವ, ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ನಡೆದುಕೊಳ್ಳುವುದರಿಂದ ಜನರು ಬೇಸತ್ತಿದ್ದಾರೆ, ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ" ಎಂದು ಯಡಿಯೂರಪ್ಪ ತಿಳಿಸಿದರು.