"ರಾಯಣ್ಣ ಪುತ್ಥಳಿ ವಿವಾದ; ಕುರುಬ ನಾಯಕರ ಜತೆ ಚರ್ಚಿಸಿಯೇ ನಿರ್ಧಾರ"
ಬೆಳಗಾವಿ, ಆಗಸ್ಟ್ 27: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಕುರುಬ ನಾಯಕರ ಜತೆಗೆ ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿವಾದ ಇತ್ಯರ್ಥ ಸಂಬಂಧ ಸಮಾಜ ಮುಖಂಡರ ಸಭೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸರ್ವ ಪಕ್ಷದ ನಾಯಕರ ಜತೆಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕಿದೆ. ಈ ಸಂಬಂಧ ಈಗಾಗಲೇ ಸಿಎಂ, ಗ್ರಹ ಸಚಿವರು ಹಾಗೂ ಕಾಗಿನೆಲೆ ಸ್ವಾಮೀಜಿ ಮಾತನಾಡಿದ್ದಾರೆ. ನಾನೂ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಚ್. ವಿಶ್ವನಾಥ್, ಮಾಜಿ ಸಚಿವ ರೇವಣ್ಣ ಹಾಗೂ ಸತೀಶ್ ಜಾರಕಿಹೊಳಿ ಅವರ ಜತೆ ಮಾತನಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ತೆಗದುಕೊಳ್ಳುತ್ತೇನೆ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಕಾನೂನಿನ ಚೌಕಟ್ಟಿನಲ್ಲಿ ವಿವಾದ ಇತ್ಯರ್ಥ ಪಡಿಸಬೇಕಿದೆ. ಕಾನೂನು ಪಂಡಿತರು ಹಾಗೂ ಜಿಲ್ಲಾಡಳಿತದ ಜತೆ ಚರ್ಚೆ ನಡೆಸಿಯೇ ನಿರ್ಣಯ ಮಾಡುತ್ತೇವೆ ಎಂದರು.
ಗಣೇಶೋತ್ಸವ ಬಳಿಕ ರಾಯಣ್ಣ ಪುತ್ಥಳಿ ವಿವಾದ ಇತ್ಯರ್ಥ; ಸಚಿವ ಜಾರಕಿಹೊಳಿ ಭರವಸೆ
ವಿವಾದಿತ ಸ್ಥಳದಲ್ಲೇ ಮೂರ್ತಿ ಕೂಡಿಸುವುದಾಗಿ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಅದನ್ನು ಮಾಧ್ಯಮಗಳಿಗೆ ಹೇಳಿದ್ದಾರೆಯೇ ಹೊರತು ನನಗೆ ಹೇಳಿಲ್ಲ. ಚರ್ಚೆ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಂ ಹೇಳಿದ್ದಾರೆ. ಸಮಾಜದ ಪರವಾಗಿ ನಿರ್ಣಯ ಕೈಗೊಳ್ಳುತ್ತೇನೆ" ಎಂದರು.
ಬೃಹತ್ ಪ್ರತಿಭಟನಾ ಮೆರವಣಿಗೆ: ಪುತ್ಥಳಿ ಮರು ಸ್ಥಾಪನೆಗೆ ಆಗ್ರಹಿಸಿ ರಾಯಣ್ಣನ ಅಭಿಮಾನಿಗಳು ಬೆಳಗಾವಿಯ ಸುವರ್ಣ ಸೌಧದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪುತ್ಥಳಿ ಮರುಸ್ಥಾಪನೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಮತ್ತೊಂದೆಡೆ ವಿವಾದ ಇತ್ಯರ್ಥ ಸಂಬಂಧ ಹಾಲುಮತ ಸಮಾಜದ ನಾಯಕರ ಜೊತೆಗೆ ಸಚಿವ ಜಾರಕಿಹೊಳಿ ಸಭೆ ನಡೆಸಲಿದ್ದಾರೆ.