ಬೆಳಗಾವಿ: ನಾನು ಮಂತ್ರಿಯಾಗಲು ದೇವೇಂದ್ರ ಫಡ್ನವಿಸ್ ಆಶೀರ್ವಾದವಿದೆ
ಬೆಳಗಾವಿ, ಸೆಪ್ಟೆಂಬರ್ 20: ನಾನು ರಾಜ್ಯದಲ್ಲಿ ಮಂತ್ರಿಯಾಗಲು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಆಶೀರ್ವಾದವಿದೆ, ಹೀಗಾಗಿ ಥ್ಯಾಂಕ್ಸ್ ಹೇಳಲು ಅವರ ಭೇಟಿಯಾಗಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಪೌರ ಕಾರ್ಮಿಕರಿಗೆ ನಿರ್ಮಿಸಲಾದ ಪೌರಕಾರ್ಮಿಕರ ವಸತಿ ಸಮುಚ್ಚಯವನ್ನು ಸಚಿವ ರಮೇಶ ಜಾರಕಿಹೊಳಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
"ಮಲಪ್ರಭಾ, ಘಟಪ್ರಭಾ ನದಿಗಳ ಒತ್ತುವರಿ ತಡೆಗೆ ಶಾಶ್ವತ ಯೋಜನೆ"
ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ G+2 ಮಾದರಿಯಲ್ಲಿ ಗೋಕಾಕ್ ಪೌರಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಿಸಿ ಉದ್ಘಾಟನಾ ಸಮಾರಂಭ ನಡೆಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್, ಶಾಸಕ ಉಮೇಶ್ ಕತ್ತಿ ನನ್ನ ಹಳೆಯ ಗೆಳೆಯ. ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಖುಷಿಪಡುತ್ತೇನೆ. ಎಲ್ಲರೂ ನನ್ನ ಗೆಳೆಯರೇ ಎಲ್ಲರಿಗೂ ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದು. ಆದರೆ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತಗೆದುಕೊಳ್ಳುತ್ತದೆ ಎಂದರು.
ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ""ಥ್ಯಾಂಕ್ಸ್ ಹೇಳಲು ದೇವೇಂದ್ರ ಫಡ್ನವೀಸ್ ಭೇಟಿಯಾಗಿದ್ದೆ. ಫೆಬ್ರವರಿ 6 ರಂದು ನಾನು ಮಂತ್ರಿಯಾದ ತಕ್ಷಣ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನವಿಸ್ ಭೇಟಿಯಾಗಿರಲಿಲ್ಲ.''
ದೆಹಲಿಯಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದು, ಇದು ಸೌಜನ್ಯಯುತ ಭೇಟಿಯಷ್ಟೇ. ನಾನು ಮಂತ್ರಿಯಾಗಲು ದೇವೇಂದ್ರ ಫಡ್ನವಿಸ್ ಅವರ ಪ್ರಮುಖ ಆಶೀರ್ವಾದವಿದೆ. ಹೀಗಾಗಿ ಥ್ಯಾಂಕ್ಸ್ ಹೇಳಲು ದೇವೇಂದ್ರ ಫಡ್ನವಿಸ್ ಭೇಟಿಯಾಗಿದ್ದೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.