ಜನರಿಗಾಗಿ ಎಂಥ ಸಂಕಷ್ಟ ಸಹಿಸಿಕೊಳ್ಳಲೂ ಸಿದ್ಧ: ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ, ಸೆಪ್ಟೆಂಬರ್ 11: ಒಳ್ಳೆಯ ಕೆಲಸ ಮಾಡುವವರಿಗೆ ನೂರೆಂಟು ವಿಘ್ನಗಳು ಬರುವುದು ಸಹಜ. ಹಾಗೆಯೇ ಕ್ಷೇತ್ರದ ಜನರಿಗಾಗಿ ನಾನು ಪ್ರತಿ ದಿನ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಕೆಲಸಗಳನ್ನು ಮಾಡುತ್ತಿದ್ದೇನೆ. ಇದನ್ನು ಸಹಿಸದವರಿಂದ ನಿತ್ಯ ಸಂಕಷ್ಟ, ಸಂಘರ್ಷ ಎದುರಾಗುತ್ತಿದೆ. ಆದರೆ ನನ್ನ ಕ್ಷೇತ್ರದ ಜನರಿಗಾಗಿ ನಾನು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ, ಮುಂದೆಯೂ ಎಷ್ಟೇ ಕಷ್ಟ ಎದುರಾದರೂ ನಿಮಗಾಗಿ ನಾನು ಎದುರಿಸಲು ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದಾರೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಮಾತನಾಡಿದ ಅವರು, "ನಾನು ಶಾಸಕಿಯಾದ ನಂತರವೂ ನನಗೆ ಇಷ್ಟೊಂದು ಸಂಕಷ್ಟ ಎದುರಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಿರಾತಂಕವಾಗಿ ಜನರ ಕೆಲಸವನ್ನು ಮಾಡಿಕೊಂಡು ಹೋಗಬಹುದು ಎಂದುಕೊಂಡಿದ್ದೆ. ಆದರೆ ಜನರಿಗಾಗಿ ಕೆಲಸ ಮಾಡುವುದನ್ನೂ ಸಹಿಸಿಕೊಳ್ಳದಿದ್ದರೆ ನಾನೇನು ಮಾಡಲು ಸಾಧ್ಯ? ಒಳ್ಳೆಯ ಕೆಲಸ ಮಾಡುವುದನ್ನು ಸಹಿಸಿಕೊಳ್ಳದವರನ್ನು ಏನನ್ನಬೇಕು? ಎಲ್ಲ ಸಂಕಷ್ಟಗಳ ಮಧ್ಯೆಯೂ ನಾನು ಜಗ್ಗದೆ, ಕುಗ್ಗದೆ ಕೆಲಸ ಮಾಡುತ್ತಿದ್ದೇನೆ. ಇದನ್ನು ಯಾವುದೇ ಕಾರಣದಿಂದ ನಿಲ್ಲಿಸುವುದಿಲ್ಲ. ಕ್ಷೇತ್ರದ ಜನರ ದೊಡ್ಡ ಶಕ್ತಿ ನನ್ನ ಜೊತೆಗಿರುವಾಗ ನಾನೇಕೆ ಅಳುಕಬೇಕು" ಎಂದು ಅವರು ಪ್ರಶ್ನಿಸಿದರು.
ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ತಿ ವಿವರ; ಕೋಟಿ ಕೋಟಿ ಹಣ ಇದ್ದರೂ ಬಂಗಾರ ಮಾತ್ರ ಇಲ್ಲ
ರಾಜಕೀಯ ಚುನಾವಣೆಯ ಸಂದರ್ಭದಲ್ಲಿರಬೇಕು ಎಂದು ಬಯಸುವವಳು ನಾನು. ಚುನಾವಣೆಯ ನಂತರ ಅಭಿವೃದ್ಧಿಯಲ್ಲಿ ಪೈಪೋಟಿ ಮಾಡೋಣ. ಒಬ್ಬರಿಗಿಂತ ಒಬ್ಬರು ಹೆಚ್ಚು ಕೆಲಸಗಳನ್ನು ತರುವುದಕ್ಕೆ ಪ್ರಯತ್ನಿಸೋಣ. ಆದರೆ ಇದರಲ್ಲೂ ರಾಜಕೀಯ ನೋಡಿ ಬೇಜಾರಾಗುತ್ತಿದೆ. ಅಂಥವರನ್ನು ಜನರು ಮತ್ತು ದೇವರೇ ನೋಡಿಕೊಳ್ಳುತ್ತಾನೆ. ನಾನು ಹೆಚ್ಚು ತಲೆಕೆಡಿಸಿಕೊಳ್ಳದೆ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.