ನಾನೊಬ್ಬ ಆರೆಸ್ಸೆಸ್ ಕಾರ್ಯಕರ್ತ, ತಾಕತ್ತಿದರೆ ಬಂಧಿಸಿ: ಸಿದ್ದುಗೆ ಸವಾಲು
ಬೆಳಗಾವಿ, ಜನವರಿ 11: ಆರೆಸ್ಸೆಸ್ ಹಾಗೂ ಬಜರಂಗ ದಳದವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನೀಡಿದ್ದ ಹೇಳಿಕೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಕಾರ್ಯಕರ್ತರೊಬ್ಬರು ಪ್ರತಿಯಾಗಿ ಸವಾಲು ಹಾಕಿದ್ದಾರೆ. ಬೆಳಗಾವಿ ಮೂಲದವರಾದ ಶಿವಲಿಂಗಪ್ರಭು ಹೂಗಾರ ಫೇಸ್ ಬುಕ್ ನಲ್ಲಿ ಸವಾಲು ಹಾಕಿರುವ ಪೋಸ್ಟ್ ಮಾಡಿದ್ದಾರೆ.
'ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು'
ನಾನೊಬ್ಬ ಆರೆಸ್ಸೆಸ್ ಕಾರ್ಯಕರ್ತ. ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಸವಾಲೆಸೆದಿದ್ದಾರೆ. ಆರೆಸ್ಸೆಸ್ ಸಮವಸ್ತ್ರ ಧರಿಸಿದ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಲಾಗಿದೆ.
ಆರೆಸ್ಸೆಸ್ ಹಾಗೂ ಭಜರಂಗದಳದವರು ಉಗ್ರಗಾಮಿಗಳು ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ವಯಂ ಸೇವಕರನ್ನು ಮುಟ್ಟಿ ನೋಡಿ, ಆಮೇಲಿನ ಪರಿಣಾಮ ನೋಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಎಲುಬಿಲ್ಲದ ನಾಲಗೆ...ಇತ್ಯಾದಿ ಕಾಮೆಂಟ್ ಗಳನ್ನು ಹಾಕಲಾಗಿದೆ.