ಸಿಎಂ ಯಡಿಯೂರಪ್ಪ ಕುರ್ಚಿಯ ಮೇಲೆ ಕಣ್ಣು ಹಾಕಿದ ಉಮೇಶ್ ಕತ್ತಿ
ಬೆಳಗಾವಿ, ಫೆಬ್ರವರಿ 10: ಸಚಿವ ಸ್ಥಾನದಿಂದ ವಂಚಿತರಾಗಿ ಬಿಜೆಪಿ ಮೇಲೆ ಮುನಿಸಿಕೊಂಡಿರುವ ಉಮೇಶ್ ಕತ್ತಿ, 'ನನಗೆ ಸಿಎಂ ಸ್ಥಾನವೇ ಸಿಗಬೇಕಿತ್ತು' ಎಂದಿದ್ದಾರೆ.
ಹಿಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, 'ನನಗಿರುವ ಯೋಗ್ಯತೆಗೆ ಸಚಿವ ಸ್ಥಾನ ಮಾತ್ರವಲ್ಲ, ಸಿಎಂ ಸ್ಥಾನವೇ ಸಿಗಬೇಕಿತ್ತು, ಆ ದಿಸೆಯಲ್ಲಿ ನನ್ನ ಪ್ರಯತ್ನವೂ ಮುಂದುವರೆದಿದೆ, ದೇವರ ಆಶೀರ್ವಾದರಿಂದ ಸಿಎಂ ಆಗಿಯೇ ಆಗುತ್ತೇನೆ' ಎಂದಿದ್ದಾರೆ.
ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ ಅಧಿಕೃತ ಪಟ್ಟಿ
'ನನಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ನಾನೇನು ಮುನಿಸಿಕೊಂಡಿಲ್ಲ, ನನ್ನ ಹೆಂಡಿತಿಯೊಂದಿಗೇ ನಾನು ಮುನಿಸಿಕೊಳ್ಳುವುದಿಲ್ಲ, ಇನ್ನು ಯಡಿಯೂರಪ್ಪ ಜೊತೆಗೆ ಏಕೆ ಮುನಿಸಿಕೊಳ್ಳಲಿ' ಎಂದು ಕತ್ತಿ ಪ್ರಶ್ನೆ ಮಾಡಿದರು.
'ಯಡಿಯೂರಪ್ಪ ಒಳ್ಳೆಯ ಸರ್ಕಾರ ನಡೆಸುತ್ತಿದ್ದಾರೆ. ಈ ಹಿಂದೆ ನಾನು ಮಂತ್ರಿ ಆಗಿದ್ದೇನೆ ಎಂಬ ಕಾರಣಕ್ಕೆ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ಕೊಡಲಿ, ನಾನು ನನ್ನ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ' ಎಂದಿದ್ದಾರೆ.
ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ನೀಡಿರುವ ಬಗ್ಗೆ ಮಾತನಾಡಿದ ಕತ್ತಿ, 'ನನಗೆ ರಾಜಕೀಯ ಅನುಭವ ಕಡಿಮೆ, ಅವರಿಗೆ ಹೆಚ್ಚಿದೆ ಎನಿಸುತ್ತದೆ. ಮುಂದೆ ನನಗೆ ಮಂತ್ರಿಗಿರಿ ಸಿಕ್ಕರೆ ನೋಡೋಣ, ಈಗ ಯಾರೇ ಜಿಲ್ಲಾ ಸಚಿವರಾಗಿ ಬಂದರೂ ಅವರನ್ನು ಸ್ವಾಗತಿಸುತ್ತೇನೆ' ಎಂದಿದ್ದಾರೆ.