ಬೆಳಗಾವಿ: ಕೋವಿಡ್ ನಿಯಮ ಮೀರಿ ಕುದುರೆಯ ಅಂತ್ಯಕ್ರಿಯೆಯಲ್ಲಿ ನೂರಾರು ಜನರು
ಬೆಳಗಾವಿ, ಮೇ 24: ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಸೋಂಕಿನ ಕರಾಳತೆಗೆ ಹಣಕ್ಕೆ ಬಿಡಿ, ಜೀವಕ್ಕೂ ಬೆಲೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ನಾವು ಮಾನವರು ಇನ್ನಿಲ್ಲದಂತೆ ತಪ್ಪುಗಳನ್ನು ಮಾಡುತ್ತಿದ್ದೇವೆ.
ಹೌದು. ಕರ್ನಾಟಕದಲ್ಲಿ ಜಾರಿಯಲ್ಲಿರುವ ಪ್ರಸ್ತುತ ಕೋವಿಡ್-19 ನಿರ್ಬಂಧಗಳನ್ನು ಉಲ್ಲಂಘಿಸಿ ಭಾನುವಾರ ಬೆಳಗಾವಿಯ ಮರಡಿಮಠ ಪ್ರದೇಶದಲ್ಲಿ ಕುದುರೆಯ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಸೇರಿದ್ದರು. ಕೊರೊನಾ ವೈರಸ್ ಭಯವಿಲ್ಲದೆ ಜನರು ತಾವು ನಂಬಿದ "ದೈವಿಕ' ರೂಪದ ಕುದುರೆ ಮೃತಪಟ್ಟಿದ್ದು, ಅದರ ಅಂತಿಮ ವಿಧಿ-ವಿಧಾನಗಳಿಗಾಗಿ ಭಾಗವಹಿಸಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟಲು ರಾಜ್ಯ ಹಾಗೂ ದೇಶದಲ್ಲಿ ಇನ್ನಿಲ್ಲದಂತೆ ಲಕ್ಷಾಂತರ ಫ್ರಂಟ್ಲೈನ್ ವರ್ಕರ್ಸ್ಗಳು ಹಗಲು, ರಾತ್ರಿಯನ್ನದೇ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಹಲವು ಕುಟುಂಬಗಳು ಕೋವಿಡ್ನಿಂದ ಮೃತರಾದ ಶವಗಳನ್ನು ಕೊನೆಯ ಬಾರಿ ನೋಡಲು ಆಗದಂತಹ ಈ ಪರಿಸ್ಥಿತಿಯಲ್ಲಿದ್ದೇವೆ. ಆದರೂ ಇಷ್ಟು ಜನರು ಒಂದೆಡೆ ಸೇರಿದರೆ ಕೊರೊನಾ ಸೋಂಕಿಗೆ ನಾವೇ ಆಸ್ಪದ ಕೊಟ್ಟಂತೆ ಆಗುವುದಿಲ್ಲವೇ.
ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಗರಿಷ್ಠ 20 ಜನ ಮಾತ್ರ ಸೇರಬಹುದು ಎಂದು ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಬೆಳಗಾವಿಯಲ್ಲಿ ನೂರಾರು ಜನರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಒಂದೆಡೆ ಸೇರಿದ್ದಾರೆ. ಅಲ್ಲದೇ ಈ ವೇಳೆ ಯಾವುದೇ ಸಾಮಾಜಿಕ ಅಂತರವಿರಲಿಲ್ಲ ಮತ್ತು ಕೆಲವರು ಮಾಸ್ಕ್ಗಳನ್ನೂ ಧರಿಸಿರಲಿಲ್ಲ.
"ಬೆಳಗಾವಿಯಲ್ಲಿ ಕುದುರೆಯ ಅಂತ್ಯಕ್ರಿಯೆಗಾಗಿ ನೂರಾರು ಜನರು ಸೇರಿದ ಘಟನೆಯನ್ನು ಬೆಳಗಾವಿ ಜಿಲ್ಲಾಡಳಿತ ಪರಿಶೀಲಿಸಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು'' ಎಂದು ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.