ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ ಹುಕ್ಕೇರಿ ಮಠದ ಸ್ವಾಮೀಜಿ
ಬೆಳಗಾವಿ, ಮೇ 18: ರಾಜ್ಯದ ಎಲ್ಲಾ ಧರ್ಮದ ಅರ್ಚಕರ (ಪುರೋಹಿತರ) ಕುಟುಂಬಗಳ ನೆರವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬರಬೇಕೆಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಗಳು ಮನವಿ ಮಾಡಿದ್ದಾರೆ.
ಲಾಕ್ ಡೌನ್ ಜಾರಿಯಾಗಿ ಸುಮಾರು ಎರಡು ತಿಂಗಳಾಗಿದ್ದು, ದೇವಸ್ಥಾನ, ಮಠಗಳ ಬಾಗಿಲು ಬಂದ್ ಮಾಡಲಾಗಿದೆ. ದಿನನಿತ್ಯ ಕೇವಲ ದೇವರ ಪೂಜೆ ಮಾಡಿ ಭಕ್ತರು ನೀಡುವ ಸಹಾಯದಿಂದ ಎಷ್ಟೋ ಅರ್ಚಕರ(ಪುರೊಹಿತರ) ಕುಟುಂಬಗಳು ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್ ಡೌನ್ ನಿಂದ ಅಂತಹ ಸಾವಿರಾರು ಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ ಎಂದರು.
ಬೆಳಗಾವಿಗೆ ಕಂಟಕವಾಗುತ್ತಾ ಮುಂಬೈನ ಧಾರಾವಿ ಸ್ಲಂ
ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ತಮ್ಮ ಹುಕ್ಕೇರಿ ಹಿರೇಮಠದ ಆವರಣದಲ್ಲಿ ಎಲ್ಲ ಧರ್ಮದ ವಿವಿಧ ದೇವಸ್ಥಾನಗಳು, ಮಠ, ಬಸ್ತಿ ಹಾಗೂ ಮಸೀದಿಗಳ ಅರ್ಚಕರು, ಪೂಜಾರಿಗಳು, ಮೌಲಾಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರದ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಅರ್ಚಕರ ನೆರವಿಗೆ ಬರಬೇಕು, ಅಲ್ಲದೇ ಈಗಾಗಲೇ ಹುಕ್ಕೇರಿ ಮಠದಿಂದ ಜಿಲ್ಲೆಯಾದ್ಯಂತ 2 ಸಾವಿರ ಮಾಸ್ಕ್, ಒಂದು ಸಾವಿರ ಆಹಾರ ಕಿಟ್ ಗಳನ್ನು ಕೂಲಿ ಕಾರ್ಮಿಕರಿಗೆ, ಬಡ ಕುಟುಂಬಗಳಿಗೆ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಯಬಾಗ ಶಾಸಕ ಡಿ.ಎಂ ಐಹೊಳೆ, ಅರುಣ ಐಹೊಳೆ, ರವಿ ರಂಗೋಲಿ, ತಾಲೂಕಿನ ವಿವಿಧ ದೇವಸ್ಥಾನಗಳ ಅರ್ಚಕರು ಉಪಸ್ಥಿತರಿದ್ದರು.