ಕಾಂಗ್ರೆಸ್ ಸೇರ್ತಾರೆ ಎನ್ನುವ ಗಾಳಿಪಟಕ್ಕೆ ಉಮೇಶ್ 'ಕತ್ತಿ' ಏಟು
ಬೆಳಗಾವಿ, ಡಿಸೆಂಬರ್ 8: ಬೆಳಗಾವಿಯ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಇದೀಗ ತೆರೆಬಿದ್ದಿದೆ.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಕಾಂಗ್ರೆಸ್ ಗೆ?
ಸ್ವತಃ ಶಾಸಕ ಉಮೇಶ್ ಕತ್ತಿ ಅವರೇ ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, "ನಾನು ಬಿಜೆಪಿಯಲ್ಲೆ ಇರ್ತೇನೆ, ಕಾಂಗ್ರೆಸ್ ಸೇರುವ ಪ್ರಶ್ನಯೇ ಇಲ್ಲ" ಎಂದು ತಮ್ಮ ಮೇಲೆ ಎದ್ದಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಆತ್ಮೀಯರು ಅಷ್ಟೆ, ನಾನು ಕಾಂಗ್ರೆಸ್ ನಿಂದ ಹಿಂದೆ ಸೋತಿದ್ದೆ, ಆದರೆ, ಮತ್ತೆ ನಾನು ಆ ಪಕ್ಷಕ್ಕೆ ಸೇರಲ್ಲಾ ಎಂದು ಹೇಳಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಮೇಶ್ ಕತ್ತಿ ಅವರ ಮನೆಗೆ ಹೋಗಿ ಕುಶಲೋಪಾರಿ ವಿಚರಿಸಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಅವರು ಉಮೇಶ್ ಕತ್ತಿ ಅವರನ್ನು ಪಕ್ಷಕ್ಕೆ ಕರೆತರಲು ಗಾಳ ಹಾಕಲು ಬಂದಿದ್ದರು ಎಂದು ಜಿಲ್ಲೆಯಲ್ಲಿ ಗುಸು-ಗುಸು ಮಾತುಗಳು ಶುರುವಾಗಿದ್ದವು.
ಈ ಗುಸು-ಗುಸು ಮಾತುಗಳೆಲ್ಲವು ಉಮೇಶ್ ಕತ್ತಿ ಕಿವಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದು ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.
ಅದ್ಯಾಕೋ ಕತ್ತಿ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಚುನಾವಣೆಯ ಕೊನೆಯಲ್ಲಿ ಕತ್ತಿ ಕಾಂಗ್ರೆಸ್ ಸೇರಿದರೂ ಅಶ್ಚರ್ಯ ಪಡಬೇಕಿಲ್ಲ.