'ಸ್ವಾತಂತ್ರ್ಯ ನಡಿಗೆ' ಕರೆಗೆ 1 ಲಕ್ಷ ಮಂದಿ ಸ್ಪಂದನೆ: ಡಿಕೆ ಶಿವಕುಮಾರ್
ಬೆಂಗಳೂರು ಆಗಸ್ಟ್ 15: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡ 'ಸ್ವಾತಂತ್ರ್ಯ ನಡಿಗೆ' (ಫ್ರಿಡಂ ಮಾರ್ಚ್)ಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸ್ಪಂದಿಸಿದ್ದಾರೆ.
ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ವರೆಗೆ ಕೆಪಿಸಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಸ್ವಾತಂತ್ರ್ಯ ನಡಿಗೆ ನಡೆಯಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬಿದ ಈ ಘಳಿಗೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ವೀರರು, ಶೂರರ ತ್ಯಾಗ ಬಲಿದಾನ ಸ್ಮರಣೆಗಾಗಿ, ಮಹನೀಯರಿಗೆ ಗೌರವ ಸಲ್ಲಿಸಲು ಈ ನಡಿಗೆ ಹಮ್ಮಿಕೊಳ್ಳಲಾಗಿದೆ.
ನೆಹರು ಜಾಹೀರಾತು ವಿವಾದ; ಅಮೃತ ಮಹೋತ್ಸವ ಬಹಿಷ್ಕಾರಕ್ಕೆ ಮನವಿ
ಇದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡರಾದ ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಸೇರಿದಂತೆ ಪ್ರಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಗಟ್ಟಲೆ ಜನರು ಸೇರುವ ನಿರೀಕ್ಷೆ ಇದೆ. ರಸ್ತೆಯುದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಭಾರತದ ಸಂಕೇತವಾದ ತ್ರಿವರ್ಣ ಧ್ವಜ ರಾರಾಜಿಸಲಿವೆ.
ನಡಿಗೆಯಲ್ಲಿ ಲಕ್ಷ ಮಂದಿ ಭಾಗಿ
ಕಾಂಗ್ರೆಸ್ ಕರ್ನಾಟಕದ ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ.ಶಿವಕುಮಾರ್ ಅವರು ನೀಡಿದ ಕರೆಗೆ ಒಂದು ಲಕ್ಷ ಜನರು ಸ್ಪಂದಿಸಿದ್ದಾರೆ. ತಾವು ನಡಿಗೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಡಿ.ಕೆ.ಶಿವಕುಮಾರ್, ಸರಿಯಾದ ಗುರಿ ನಿರ್ಧರಿಸಿದರೆ ನಾವು ಅರ್ಧ ದಾರಿ ತಲುಪಿದಂತೆ. ಸ್ವಾತಂತ್ರ್ಯ ನಡಿಗೆಗೆ ಜನ ಸೇರಿಸುವ ನಮ್ಮ ನಿರೀಕ್ಷೆ ಹುಸಿಯಾಗಿಲ್ಲ ಎಂದು ಅವರಿಗೆಲ್ಲ ಅಭಿನಂದನೆ ತಿಳಿಸಿದರು.
ಇದಕ್ಕೆ ಪೂರಕವಾಗಿ ಕಾಂಗ್ರೆಸ್ನ ಶಾಸಕರು, ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷರು, ಶಾಸಕರು, ಹಿರಿಯ ಮುಖಂಡರು ಅಭಿಯಾನ ಆರಂಭಿಸಿದ್ದಾರೆ. ನಾವು ಸ್ವಾತಂತ್ರ್ಯ ನಡಿಗೆಯಲ್ಲಿ ಪಾಲ್ಗೊಳ್ಳುತ್ತೇವೆ. ನೀವು ಪಾಲ್ಗೊಳ್ಳಿ ಎಂದು ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ. ಮಧ್ಯಾಹ್ನ ಆರಂಭವಾಗುವ ಕಾರ್ಯಕ್ರಮ ಸಂಬಂಧ ಪೊಲೀಸರು ಸೂಕ್ತ ಬಿಗಿ ಭದ್ರತೆ ಒದಗಿಸಲು ಸಜ್ಜಾಗಿದ್ದಾರೆ. ಸಂಜೆ ನ್ಯಾಷನಲ್ ಕಾಲೇಜು ಮೈದಾನದತ್ತ ಹೆಜ್ಜೆ ಹಾಕುವ ಕಾಂಗ್ರೆಸ್ ನಾಯಕರು ಅಲ್ಲಿ ವೇದಿಕೆಯಲ್ಲಿ ಸ್ವಾತಂತ್ರೋತ್ಸವ ಕುರಿತು, ಹೋರಾಟಗಾರರು ತ್ಯಾಗ, ಬಲಿದಾನ, ಕಾಂಗ್ರೆಸ್ ಚಿಂತನೆ ಕುರಿತು ಮಾತನಾಡಲಿದ್ದಾರೆ.