ಬೆಳಗಾವಿ : ಅರಣ್ಯ ಸಚಿವರ ಮೇಲೆ ಹೆಜ್ಜೇನು ದಾಳಿ
Recommended Video
ಬೆಳಗಾವಿ, ನವೆಂಬರ್ 24 : ವೇದಿಕೆ ಮೇಲೆ ಕೂತು ರಾಜ್ಯದ ಅರಣ್ಯಗಳ ಬಗ್ಗೆ ಪುಂಖಾನು ಪುಂಖಾನವಾಗಿ ಮಾತನಾಡಲು ಸಜ್ಜಾಗಿದ್ದ ಅರಣ್ಯ ಸಚಿವ ರಮಾನಾಥ ರೈ ಮೇಲೆ ಜೇನು ಹುಳುಗಳು ಸಾಮೂಹಿಕವಾಗಿ ದಾಳಿ ನಡೆಸಿ ಸಚಿವರ ಮುಸುಡಿಗೆ ಮುತ್ತಿಕ್ಕಿ ಅವರ ಮುಖಾರವಿಂದ ಇನ್ನಷ್ಟು 'ಅರಳುವಂತೆ' ಮಾಡಿವೆ.
ಜಿಲ್ಲೆಯಲ್ಲಿ ವಿಟಿಯು ಕಾಲೇಜಿನ ಬಳಿಯ ನೂತನ ಉದ್ಯಾನವನ ಉದ್ಘಾಟನಾ ಸಮಾರಂಭಕ್ಕೆ ಹೋಗಿ ವೇದಿಕೆ ಏರಿ ಕೂತಿದ್ದ ಅರಣ್ಯ ಸಚಿವರಿಗೆ ಜೇನು ಹುಳುಗಳು ಕಚ್ಚಿ ಸಚಿವರು ಸ್ಥಳದಿಂದಲೇ ಪೇರಿ ಕೀಳುವಂತೆ ಮಾಡಿವೆ.
ಸಚಿವರಗೆ ಮಾತ್ರವಲ್ಲದೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿಗಳು ಸಹ ಜೇನು ದಾಳಿಯಿಂದ ಮೂಖ ಊದಿಸಿಕೊಂಡು ಹನುಂತನ ಸಹೋದದರಂತಾಗಿದ್ದಾರೆ.
ದಾಳಿ ನಡೆದ ಕೂಡಲೇ ಅರಣ್ಯ ಸಚಿವರನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸಚಿವರ ಸುತ್ತಲೂ ಮಾನವ ಕೋಟೆ ಕಟ್ಟಿದರೂ ಸಹ, ಕೋಟೆ ಬೇಧಿಸಿ ಬಂದ ಕೆಲವು ಜೇನು ಹುಳುಗಳು ಸಚಿವರಿಗೆ ಕುಟುಕಿ ಹೋಗಿವೆ.
ಅರಣ್ಯ ಸಚಿವರು ಸರಿಯಾಗಿ ಜವಾಬ್ದಾರಿ ನಿರ್ವಹಿಸದೆ ಅರಣ್ಯ ಖಾಲಿಯಾಗುತ್ತಾ ಅಳಿಯುತ್ತಿರುವ ಕೀಟ ಪ್ರಭೇದಗಳ ಪ್ರತಿನಿಧಿಗಳಾಗಿ ಸಚಿವರಿಗೆ ಕುಟುಕುವ ಮೂಲಕ ತಮ್ಮ ಪ್ರತಿಭಟನೆಯನ್ನು ಜೇನು ನೊಣಗಳು ದಾಖಲಿಸಿವೆಯೇ? ಅಥವಾ ಪರಿಸರದ ಮಕ್ಕಳ ಪ್ರತಿನಿಧಿ ಕರ್ವಾಲೊದ ಮಂದಣ್ಣ, ತನ್ನ ಪ್ರೀತಿಯ ಕಾಡಿನ ಮೇಲಾಗುತ್ತಿರುವ ಅತ್ಯಾಚಾರವನ್ನು ಪ್ರತಿಭಟಿಸುವ ಸಲುವಾಗೆ ಸಮಾರಂಭಕ್ಕೆ ಬಂದು ಡ್ರಮ್ ಬಾರಿಸಿ ಜೇನು ನೊಣಗಳಿಗೆ ಪ್ರಚೋದನೆ ನೀಡಿದನೆ?.
ಜೇನು ನೊಣಗಳು ಯಾವ ಕಾರಣಕ್ಕಾಗಿ ಸಚಿವರಿಗೆ ಕಚ್ಚದವೊ ಕಾರಣ ತಿಳಿಯದೆ ಇದ್ದರೂ, ಸಾಹಿತ್ಯಿಕ ಪರಿಭಾಷೆಯಲ್ಲಿ ಘಟನೆಯನ್ನು ನೋಡಿದಾಗ ಮೇಲಿನ ರೀತಿಯ ಹಲವಾರು ಅರ್ಥಗಳು ಹೊಳೆಯದೇ ಇರವು.
ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಖಾಲಿಯಾಗುತ್ತಿರುವುದು ಕಾಡನ್ನೇ ನಂಬಿಕೊಂಡ ಜೀವಿಗಳು, ಕ್ರಿಮಿಗಳು, ಮನುಷ್ಯರಿಗೆ ದಿಕ್ಕು ದೋಚದಂತಾಗಿರುವುದು ಸತ್ಯ. ಇಂದು (ನವೆಂಬರ್ 24) ನಡೆದ ಘಟನೆ ಪರಿಸರದ ಪ್ರತಿನಿಧಿಗಳ ಪ್ರತಿಭಟನೆ ಎಂದು ಸಚಿವರು ಭಾವಿಸಿ ಅರಣ್ಯ ರಕ್ಷಣೆಗೆ ಮುಂದಾಗುತ್ತಾರೆನೋ ಎಂಬ ಆಸೆ ಪರಿಸರ ಪ್ರಿಯರದ್ದು.