ಮಳೆ ನಿಲ್ಲಿಸೋ ಮಹಾದೇವ... ಅತಿವೃಷ್ಟಿ ನಿಲ್ಲಿಸಲು ಬೆಳಗಾವಿಯಲ್ಲಿ ಹೋಮ
ಬೆಳಗಾವಿ, ಆಗಸ್ಟ್ 10: ಬರಗಾಲ ತಡೆದು, ಮುಂಗಾರು ಉತ್ತಮವಾಗಿ ಚೆನ್ನಾಗಿ ಮಳೆಯಾಗಲೆಂದು ದೇವರಲ್ಲಿ ಬೇಡಿಕೊಂಡು ರಾಜ್ಯದ ಹಲವೆಡೆ ಹೋಮ ಹವನಗಳು ನಡೆದವು. ನೀರ ದಾಹವನ್ನು ನೀಗಿಸಿ ಮಳೆ ನೀಡು ದೇವರೇ ಎಂದು ಎಷ್ಟೋ ಜಿಲ್ಲೆಗಳಲ್ಲಿ ಪೂಜೆ, ಪರ್ಜನ್ಯ ಜಪ, ಹೋಮ ಹವನಗಳನ್ನು ಗ್ರಾಮಸ್ಥರು ನಡೆಸಿದರು. ಸರ್ಕಾರವೇ ಹೋಮ ಹವನ ಮಾಡಿಸಲು ಮುಜರಾಯಿ ಇಲಾಖೆಗೆ ಸೂಚಿಸಿತ್ತು. ಇವೆಲ್ಲಾ ನಡೆದಿದ್ದು ಇದೇ ಮೇ-ಜೂನ್ ನಲ್ಲಷ್ಟೆ.
ಆದರೆ ಇದೀಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಮಳೆ ನಿಲ್ಲಲೆಂದು ಹೋಮ ಹವನ ನಡೆಸುವ ಸ್ಥಿತಿ ಎದುರಾಗಿದೆ.
ಪ್ರವಾಹದಿಂದ 6 ಸಾವಿರ ಕೋಟಿ ನಷ್ಟ, 24 ಸಾವು: ಯಡಿಯೂರಪ್ಪ
ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಳಗಾವಿ, ಚಿಕ್ಕಮಗಳೂರು ಹೀಗೆ ಮಳೆಯಿಲ್ಲದೇ, ನೀರಿಗೆ ತತ್ವಾರ ಉಂಟಾಗಿ ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳನ್ನು ವಿಶೇಷವಾಗಿ ನಡೆಸಲಾಗಿತ್ತು. ಮಳೆ ಕರುಣಿಸು ದೇವಾ ಎಂದು ಮೊರೆಯಿಟ್ಟು ಮಳೆಗಾಗಿ ಎದುರುನೋಡುತ್ತಿದ್ದರು. ಆದರೆ ಈಗ ದೇಗುಲಗಳೇ ನೀರಿನಲ್ಲಿ ಮುಳುಗಡೆಯಾಗುತ್ತಿವೆ.
ಈ ನಡುವೆ ಮಹಾ ಮಳೆಯನ್ನು ನಿಲ್ಲಿಸುವಂತೆ ಪ್ರಾರ್ಥಿಸಿ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಬೆಳಗಾವಿಯಲ್ಲಿ ಮಹಾ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.
ಲೋಕ ಕಲ್ಯಾಣಕ್ಕಾಗಿ ಬೆಳಗಾವಿ ಸಂಗಮೇಶ್ವರ ದೇವಸ್ಥಾನದಲ್ಲಿ ಮಳೆ ನಿಲ್ಲಿಸಿ ಜಗತ್ತನ್ನು ಕಾಪಾಡು ದೇವಾ ಎಂದು ಬೇಡಿಕೊಂಡು ಹೋಮವನ್ನು ನಡೆಸಲಾಯಿತು.
ಬೆಳಗಾವಿಗೆ ನಿರ್ಮಲಾ ಸೀತಾರಾಮನ್; ಅಧಿಕಾರಿಗಳಿಂದ ಮಾಹಿತಿ ಸಂಗ್ರಹ
ಉತ್ತರ ಕರ್ನಾಟದಲ್ಲಿ ಕಳೆದ 20 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಇಲ್ಲಿವರೆಗೂ ಸಂಭವಿಸಿರುವ ಅವಘಡಗಳಿಗೆ, ಹಾನಿಗೆ ಲೆಕ್ಕವೇ ಇಲ್ಲ. ಜೀವ ಉಳಿದರೆ ಸಾಕು ಎನ್ನುವಂತೆ ಬೇಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ ಜನ.
ವರುಣ ದೇವನ ಆರಾಧಿಸಿ ಅತಿವೃಷ್ಟಿ ನಿಲ್ಲಿಸಲು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಹೋಮ ನಡೆಯುತ್ತಿದೆ. ಬೆಳಗಾವಿಯ ಪುರೋಹಿತ ಸಂಘದವರ ಮುಂದಾಳತ್ವದಲ್ಲಿ ಹೋಮ ನಡೆದಿದೆ.