ಹಿರಿಯಣ್ಣನಂತೆ ವಿಕಲಚೇತನರ ಅಹವಾಲು ಆಲಿಸಿದ ಕುಮಾರಣ್ಣ
ಬೆಳಗಾವಿ, ಸೆಪ್ಟೆಂಬರ್ 16 : ಸಾಲಾಗಿ ಕುಳಿತಿರುವ ವಿಕಲಚೇತನರು. ಎಲ್ಲರ ಮೊಗದಲಿ ನಿರೀಕ್ಷೆ ಒಂದೆಡೆಯಾದರೆ ನಾಡಿನ ಮುಖ್ಯಮಂತ್ರಿ ಸ್ವತಃ ತಮ್ಮ ಬಳಿ ಬಂದು ಅಹವಾಲು ಆಲಿಸಿಯಾರೇ ಎಂಬ ಪ್ರಶ್ನಾರ್ಥಕ ಭಾವ ಇನ್ನೊಂದು ಕಡೆ. ಆದರೆ, ಯಾರ ನಿರೀಕ್ಷೆಯೂ ಹುಸಿಯಾಗಲಿಲ್ಲ.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಶನಿವಾರ ಬೆಳಗಾವಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಅವರು ಜನತಾದರ್ಶನ ನಡೆಸಿದರು, ಜನರ ಅಹವಾಲುಗಳನ್ನು ಆಲಿಸಿದರು.
ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?
ಸುವರ್ಣ ವಿಧಾನಸೌಧದ ದಕ್ಷಿಣ ದ್ವಾರದ ಬಳಿಯ ನೆಲಮಹಡಿಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಿದ್ದ ವಿಕಲಚೇತನರ ಬಳಿ ತೆರಳಿದ ಎಚ್.ಡಿ.ಕುಮಾರಸ್ವಾಮಿ ಅವರು, ಅತ್ಯಂತ ತಾಳ್ಮೆಯಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಎಚ್ಡಿಕೆ ಜನತಾ ದರ್ಶನ ಸಮಯ ಬದಲು: ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ
ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಮನೆಯ ಯಜಮಾನನಂತೆ ಸಮಾಧಾನದಿಂದಲೇ ಪ್ರತಿಯೊಬ್ಬರ ಬಳಿ ತೆರಳಿ ಅಹವಾಲು ಕೇಳಿದರು. ಹಿರಿಯರು, ಕಿರಿಯರು ಸೇರಿದಂತೆ ಎಲ್ಲರೊಂದಿಗೆ ಶಾಂತಚಿತ್ತರಾಗಿಯೇ ಮಾತನಾಡಿದ ಮುಖ್ಯಮಂತ್ರಿಗಳು, ಜನತಾದರ್ಶನದ ಮೊದಲ ಹಂತದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಅಹವಾಲು ಆಲಿಸಿದರು.
ಅಧಿಕಾರಿಗಳಿಗೆ ನಿರ್ದೇಶನ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಕರ್ನಾಟಕ ಲಾ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು, ಬಳಿಕ ಕನ್ನಡ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕುಮಾರಸ್ವಾಮಿ ಬಡಾವಣೆಗೆ ತೆರಳಿ ಅಲ್ಲಿನ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿದರು.
ಬಳಿಕ ಅಲ್ಲಿಂದ ನೇರವಾಗಿ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು. ಜನರ ಅಹವಾಲು ಆಲಿಸುತ್ತ ಮುಂದೆ ಸಾಗಿದ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳ ತಾಳ್ಮೆ
ಜನತಾದರ್ಶನದ ಮೊದಲ ಹಂತದಲ್ಲಿ ವಿಕಲಚೇತನರ ಅಹವಾಲುಗಳನ್ನು ಎಚ್.ಡಿ.ಕುಮಾರಸ್ವಾಮಿ ಆಲಿಸಿದರು. ಇದಾದ ನಂತರ ಸಂಜೆ 7 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಜನತಾದರ್ಶನ ಮುಂದುವರಿಸಿದರು. ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು 1,271ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಇಷ್ಟು ಜನರನ್ನು ನೇರವಾಗಿ ಮಾತನಾಡಿಸಿ ಅಹವಾಲು ಹೇಗೆ ಸ್ವೀಕರಿಸುತ್ತಾರೆ? ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳ ತಾಳ್ಮೆಯು ಉತ್ತರವಾಗಿತ್ತು.
ಕಣ್ಣೀರು ಹಾಕಿದ ಮಹಿಳೆಯರು
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜನರ ಬಳಿ ನೇರವಾಗಿ ತೆರಳಿ ಸಮಸ್ಯೆಯನ್ನು ಆಲಿಸಿದರು.
ಸಮಸ್ಯೆ ಹೇಳಿಕೊಳ್ಳುವಾಗ ದುಃಖ ತಡೆಯಲಾಗದೇ ಕೆಲವು ಮಹಿಳೆಯರು ಕಣ್ಣೀರು ಹಾಕಿದರು. ಅನೇಕ ವರ್ಷಗಳಿಂದ ನ್ಯಾಯ ಸಿಗದೇ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಜನರಿಗೆ ಸ್ವತಃ ಮುಖ್ಯಮಂತ್ರಿಗಳೇ ಎದುರು ನಿಂತು ಸಮಸ್ಯೆ ಕೇಳಿದಾಗ ಆದ ಆನಂದ ಬಣ್ಣಿಸಲು ಸಾಧ್ಯವಿಲ್ಲ.
ಕಾಲಿಗೆ ಬೀಳುವುದನ್ನು ತಡೆದರು
ಕೆಲವು ಜನರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಕೈಮುಗಿದು ನನಗೆ ಸಹಾಯ ಮಾಡಿ ನಿಮಗೆ ಉಪಕಾರವಾಗುತ್ತೆ ಎಂದರೆ ಇನ್ನೂ ಕೆಲವರು ಮಾತಿನ ಮೂಲಕ ಹೇಳಲಾಗದೇ ಕಾಲಿಗೆ ಬೀಳಲು ಮುಂದಾದದರು. ಅದಕ್ಕೆ ಆಸ್ಪದ ನೀಡದ ಮುಖ್ಯಮಂತ್ರಿಗಳು, ನಿಮ್ಮ ಅಹವಾಲು ಕೇಳಲೆಂದೇ ಬಂದಿರುವೆ ಎಂದಾಗ ಹಿರಿಯಣ್ಣನ ಮುಂದೆ ಸಮಸ್ಯೆ ತೋಡಿಕೊಳ್ಳುವ ರೀತಿಯಲ್ಲಿ ತುಸು ಮುಜುಗರದಿಂದಲೇ ಅಹವಾಲು ಬಿಚ್ಚಿಟ್ಟರು.
ನೊಂದವರ ಕಣ್ಣೀರು ಒರೆಸುವ ಪ್ರಯತ್ನ
ಮುಖ್ಯಮಂತ್ರಿಗಳು ಒಂದು ಚೂರು ಬೇಸರ ಮಾಡಿಕೊಳ್ಳದೇ ಜನತಾ ದರ್ಶನಕ್ಕೆ ಬಂದಿದ್ದ ಪ್ರತಿಯೊಬ್ಬರ ಸಮಸ್ಯೆ ಆಲಿಸಿದರು. ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ ಮುಖ್ಯಮಂತ್ರಿಗಳು ಕೆಲವೊಂದು ಸಮಸ್ಯೆಗಳನ್ನು ಸ್ಥಳ ದಲ್ಲೇ ಬಗೆಹರಿಸಿದರು.
ಕೆಲವು ಮನವಿಪತ್ರಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ವಹಿಸುವಂತೆ ಷರಾ ಬರೆದರು. ಮುಖ್ಯಮಂತ್ರಿಯೇ ಸ್ವತಃ ಐದಾರು ಗಂಟೆಗಳ ಕಾಲನಿರಂತರವಾಗಿ ಅಹವಾಲು ಆಲಿಸುವುದನ್ನು ಕಂಡ ಜನರು ತಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ, ಮನವಿಪತ್ರ ಅವರ ಕೈಗಿಟ್ಟು ಇಂದಲ್ಲ ನಾಳೆಯಾದರೂ ತಮ್ಮ ಸಮಸ್ಯೆ ಇತ್ಯರ್ಥವಾಗಲಿದೆ ಎಂಬ ನೆಮ್ಮದಿಯ ನಿಟ್ಟುಸಿರಿನಿಂದ ಮನೆಯತ್ತ ಹೆಜ್ಜೆ ಹಾಕಿದರು.