ಗೋಡೆ ಕುಸಿತ: ಇಬ್ಬರು ಮಕ್ಕಳು ಸಹಿತ 7 ಸಾವು
ಬೆಳಗಾವಿ, ಅ.6; ಬೆಳಗಾವಿ ತಾಲ್ಲೂಕಿನ ಬಡಲ ಅಂಕಲಗಿಯಲ್ಲಿ ಜೋರಾದ ಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಬಾಲಕಿಯರು ಸಹಿತ ಒಂದೇ ಕುಟುಂಬದ 7 ಮಂದಿ ಮೃತಪಟ್ಟಂತಹ ಧಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಪೂಜಾ ಅರ್ಜುನ ಖನಂಗಾವಿ (8) ಮತ್ತು ಕಾಶವ್ವ ವಿಠ್ಠಲ ಕೊಳಪ್ಪನವರ (8) ಎಂಬ ಇಬ್ಬರು ಮಕ್ಕಳು ಇದ್ದಾರೆ. ಅರ್ಜುನ ಹನುಮಂತ ಖನಂಗಾವಿ (45) ಆತನ ಪತ್ನಿ ಸತ್ಯವ್ವ ಖನಂಗಾವಿ (45), ಪುತ್ರಿ ಲಕ್ಷ್ಮೀ ಖನಂಗಾವಿ (18), ಗಂಗವ್ವ ಭೀಮಪ್ಪ ಖನಂಗಾವಿ (50) ಮತ್ತು ಸವಿತಾ ಭಿಮಪ್ಪ ಖನಂಗಾವಿ (28) ಮೃತಪಟ್ಟವರು. ಐವರು ಸ್ಥಳದಲ್ಲಿ ಮತ್ತು ಇಬ್ಬರು ಆಸ್ಪತ್ರೆ ಸೇರಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಹಳೆಯ ಮನೆಯ ಛಾವಣಿ ಬದಲಾಯಿಸಲು ಮನೆಯ ಪಕ್ಕದಲ್ಲಿಯೇ ಶೆಡ್ ನಿರ್ಮಿಸಿಕೊಂಡು ವಾಸವಿದ್ದರು. ಆದರೆ, ಬುಧವಾರ ಸುರಿದ ಭಾರಿ ಮಳೆಗೆ ಗೋಡೆ ಕುಸಿದು ಶೆಡ್ ನ ಮೇಲೆ ಬಿದ್ದಿದ್ದೆ. ಇದರಿಂದ ಒಂದೇ ಕುಟುಂಬದ 7 ಮಂದಿ ಸಾವಿಗೀಡಾಗಿದ್ದಾರೆ. ಮನೆಯ ಯಜಮಾನ ಭೀಮಪ್ಪ ಹಾಗೂ ಅವರ ಪುತ್ರ ಬದುಕಿಳಿದಿದ್ದಾರೆ.
ಐದು ಲಕ್ಷ ಪರಿಹಾರ:
ಬಡಾಲ ಅಂಕಲಗಿ ಮನೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತಪಟ್ಟ ವ್ಯಕ್ತಿಗಳಿಗೆ ತಲಾ 5 ಲಕ್ಷ ರುಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
"ಬೆಳಗಾವಿ ಜಿಲ್ಲಾ ಉಸ್ತುವಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ. ತಕ್ಷಣ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸಲಹೆ ನೀಡಲಾಗಿದೆ. ಬೆಳಗಾವಿ ಡಿಸಿ ಎಂ.ಜಿ. ಹಿರೇಮಠ ಅವರೊಂದಿಗೂ ಚರ್ಚಿಸಿ ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ" ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಚಿವರ ಭೇಟಿ:
ಬಡಾಲ ಅಂಕಲಗಿಯ ದುರ್ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗುರುವಾರ ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದಾರೆ.
"ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ರಕ್ಷಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಬಡಾಲ ಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಯನ್ನು ವೀಕ್ಷಿಸಿ, ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.