ಬೆಳಗಾವಿ: ಭಾರೀ ಮಳೆಗೆ ಶಿವಥಾಣ ರೈಲ್ವೆ ನಿಲ್ದಾಣದಲ್ಲಿ ಭೂಕುಸಿತ
ಬೆಳಗಾವಿ, ಆಗಸ್ಟ್ 17: ಭಾರೀ ಮಳೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಶಿವಥಾಣ ರೈಲ್ವೆ ನಿಲ್ದಾಣದ ಬಳಿ ಭೂಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಗೆ ಖಾನಾಪುರ ತಾಲೂಕಿನ ಪಾಂಡ್ರಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪಾಂಡ್ರಿ ನದಿ ಪಾತ್ರದಲ್ಲಿರುವ ಶಿವಥಾಣ ರೈಲ್ವೆ ನಿಲ್ದಾಣ ನೀರಿನ ಸೆಳೆತಕ್ಕೆ ರೈಲ್ವೆ ಹಳಿ ಪಕ್ಕದಲ್ಲಿರುವ ಭೂಮಿ ಕುಸಿತಗೊಂಡಿದೆ.
ಬೆಳಗಾವಿ: ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ
ಇನ್ನೊಂದೆಡೆ ಬೆಳಗಾವಿಯಲ್ಲಿ ಮಾರ್ಕಂಡೇಯ ನದಿ ಕೂಡಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೀಗಾಗಿ ಬೆಳಗಾವಿ ತಾಲ್ಲೂಕಿನ ಅಂಬೇವಾಡಿ-ಮಣ್ಣೂರ ಸಂಪರ್ಕಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಪ್ರಾಣ ಪಣಕ್ಕಿಟ್ಟು ಗ್ರಾಮಸ್ಥರು ಕಾಲ್ನಡಿಗೆ ಮೂಲಕ ನೀರಲ್ಲಿ ದಾಟುತ್ತಿದ್ದಾರೆ.
ಅಪಾಯದ ನಡುವೆಯೇ ಮುಳುಗಡೆಯಾದ ರಸ್ತೆಯಲ್ಲಿ ಬೈಕ್, ವಾಹನ ಸವಾರರು ದಾಟುತ್ತಿದ್ದಾರೆ. ಸುತ್ತಮುತ್ತಲಿನ ಕಬ್ಬು, ಭತ್ತದ ಗದ್ದೆಗೆ ಭಾರಿ ಪ್ರಮಾಣದ ನೀರು ನುಗ್ಗಿದ್ದು, ಮಾರ್ಕಂಡೇಯ ನದಿ ತೀರದಲ್ಲಿ ನೂರಾರು ಹೆಕ್ಟೇರ್ ಜಮೀನು ಜಲಾವೃತಗೊಂಡಿದೆ.