ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣೆಗೆ ಪ್ರವಾಹ ಭೀತಿ
ಬೆಳಗಾವಿ, ಆಗಸ್ಟ್ 06: ಮಹಾರಾಷ್ಟ್ರ ಮತ್ತು ಗಡಿನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದ್ದರಿಂದ ಪ್ರವಾಹ ಭೀತಿ ಎದುರಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಚಿಕ್ಕೋಡಿ ಉಪವಿಭಾಗದ ಯಡೂರ-ಕಲ್ಲೋಳ, ಜತ್ರಾಟ-ಭೀವಶಿ, ಅಕ್ಕೋಳ-ಸಿದ್ದನಾಳ, ಭೋಜವಾಡಿ-ಕುನ್ನೂರ, ಕಾರದಗಾ-ಭೋಜ, ಹುನ್ನರಗಿ-ಭೋಜವಾಡಿ ಸೇತುವೆಗಳು ಜಲಾವೃತಗೊಂಡಿವೆ.
ಬೆಳಗಾವಿಯಲ್ಲಿ ಬಿರುಸು ಪಡೆದ ಮಳೆ; ಜಲಾಶಯಗಳ ನೀರಿನ ಮಟ್ಟ ಏರಿಕೆ
ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮ ಬಳಿ ವೇದಗಂಗಾ ನದಿಯ ನೀರು ಹೊಲಗದ್ದೆಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಬೆಳೆದಿದ್ದ ಬೆಳೆಗೆ ಹಾನಿಯಾಗಿದೆ. ನಿಪ್ಪಾಣಿ ತಾಲೂಕಿನ ಸದಲಗಾ-ಬೊರಗಾಂವ ಜಲಾವೃತಗೊಂಡ ರಸ್ತೆಯಲ್ಲಿ ಕೊಚ್ಚಿ ಹೊಗುತಿದ್ದ ಬೈಕ್ ಸವಾರನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಕೃಷ್ಣಾ ನದಿಗೆ ನೀರು ಹೆಚ್ಚಳ
ನಿಪ್ಪಾಣಿ ತಾಲ್ಲೂಕು ಆಡಳಿತವು ಮುಂಜಾಗ್ರತಾ ಕ್ರಮವಾಗಿ ಸೇತುವೆಗಳ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದೆ. ಕೃಷ್ಣಾ ನದಿಗೆ ನೀರು ಹೆಚ್ಚಳವಾದ ಹಿನ್ನೆಲೆಯಲ್ಲಿ ತಾಲ್ಲೂಕಾಡಳಿತ ರಾತೋರಾತ್ರಿ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹಾಗೂ ತಾಲೂಕಾ ಅಧಿಕಾರಿಗಳು ಕೃಷ್ಣಾ ನದಿ ತೀರದ ಯಡೂರ ಗ್ರಾಮಕ್ಕೆ ಭೇಟಿ ನೀಡಿದರು. ಪ್ರವಾಹ ಮುಂಜಾಗ್ರತ ಕ್ರಮವಾಗಿ ಆಗಮಿಸಿದ ಎನ್.ಡಿ.ಆರ್.ಎಫ್ ತಂಡದ ಜೊತೆ ಚರ್ಚೆ ನಡೆಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ತಯಾರುಗುವಂತೆ ಎಸಿ ಸೂಚನೆ ನೀಡಿದರು.
ಕೋಯ್ನಾ ಡ್ಯಾಂ ನಿಂದ 1,20,000 ಕ್ಯೂಸೆಕ್ ನೀರು ಬಿಡುಗಡೆ
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಇದರಿಂದಾಗಿ ಮಹಾರಾಷ್ಟ್ರದ ಕೋಯ್ನಾ ಡ್ಯಾಂ ನಿಂದ 1,20,000 ಕ್ಯೂಸೆಕ್ ನೀರು ಮತ್ತು ರಾಜಾಪುರ ಬ್ಯಾರೆಜ್ ನಿಂದ 29,900 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಕೃಷ್ಣಾ ಮತ್ತು ಉಪನದಿಗಳಿಗೆ 1,31,920 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಕಾರಣದಿಂದಾಗಿ ನದಿತೀರ ಪ್ರದೇಶಗಳಲ್ಲಿ ಜಿಲ್ಲಾಡಳಿತವು ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ.
ಪಾಂಡ್ರಿ ನದಿಯಲ್ಲಿ ಸಿಲುಕಿಕೊಂಡಿದ್ದ ರೈತನನ್ನು ರಕ್ಷಿಸಲಾಗಿದೆ
ಪಾಂಡ್ರಿ ನದಿಯಲ್ಲಿ ಸಿಲುಕಿಕೊಂಡಿದ್ದ ರೈತನನ್ನು ರಕ್ಷಿಸಲಾಗಿದೆ. ನಾಲ್ಕು ಗಂಟೆಗಳ ಕಾಲ ಜೀವವನ್ನು ಕೈಯಲ್ಲಿ ಹಿಡಿದು ಮರವನ್ನು ಏರಿ ಕುಳಿತಿದ್ದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಶಿಂದೋಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕಾಪೋಲಿ ಗ್ರಾಮದ ವಿಲಾಸ ದೇಸಾಯಿ (60) ಎಂಬ ರೈತನನ್ನೆ ರಕ್ಷಣೆ ಮಾಡಲಾಗಿದೆ. ತನ್ನ ಜಮೀನಿಗೆ ಹೋಗಿದ್ದ ರೈತ ನದಿಯ ಪ್ರವಾಹಕ್ಕೆ ಸಿಲುಕಿದ್ದನು. ಮಧ್ಯಾಹ್ನ 12 ಗಂಟೆಗೆ ರೈತ ವಿಲಾಸ ಅವರು ಪಾಂಡ್ರಿ ನದಿಗೆ ಸಿಲುಕಿರುವುದು ಸ್ಥಳೀಯರಿಗೆ ಗೊತ್ತಾಗಿದೆ.
ಹಶೀಲ್ದಾರ ರೇಷ್ಮಾ ತಾಳಿಕೋಟೆ ನೇತೃತ್ವದಲ್ಲಿ ರಕ್ಷಣಾ ಕಾರ್ಯ
ಸ್ಥಳಕ್ಕೆ ಬಂದ ತಹಶೀಲ್ದಾರ ರೇಷ್ಮಾ ತಾಳಿಕೋಟೆ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಖಾನಾಪುರ ಅಗ್ನಿಶಾಮಕ ದಳದ ಠಾಣಾಧಿಕಾರಿ ಮನೋಹರ ರಾಠೋಡ್ ಮತ್ತು ಪೊಲೀಸರು ಹಗ್ಗ ಕಟ್ಟಿ ಮರದಲ್ಲಿ ಸಿಲುಕಿದ್ದ ರೈತ ವಿಲಾಸನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು.
ಅದೇ ರೀತಿ ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ.
ನಾಲೆಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು, ಅಲರವಾಡ್, ಬಸವನ ಕುಡಚಿ ಸೇರಿ ನೂರಾರು ಎಕರೆ ಬೆಳೆ ಹಾನಿಯಾಗಿದೆ.
ನವೀಲುತೀರ್ಥ ಜಲಾಶಯದ ಮಟ್ಟ ಹೀಗಿದೆ
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2066.70 ಅಡಿ
ಒಳ ಹರಿವು- 48,821 ಕ್ಯೂಸೆಕ್
ಹೊರ ಹರಿವು- 164 ಕ್ಯೂಸೆಕ್
ಇಂದಿನ ಸಂಗ್ರಹ- 22.514 ಟಿಎಂಸಿ
ಜಲಾಶಯ ಸಾಮರ್ಥ್ಯ- 37.731 ಟಿಎಂಸಿ