ಬೆಳಗಾವಿಯಲ್ಲಿ ಮತ್ತೆ ವರುಣನ ಆರ್ಭಟ; ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು
ಬೆಳಗಾವಿ, ಸೆಪ್ಟೆಂಬರ್ 21: ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತೊಮ್ಮೆ ಅವಾಂತರ ಸೃಷ್ಟಿಸಿದೆ. ಸವದತ್ತಿ ತಾಲೂಕಿನ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಯಲ್ಲಮ್ಮನ ಗುಡ್ಡದ ಎಣ್ಣೆಹೊಂಡ ಕೂಡಾ ಮಳೆಯಿಂದ ತುಂಬಿ ಹರಿಯುತ್ತಿದ್ದು, ರೇಣುಕಾ ದೇವಸ್ಥಾನದ ಆವರಣದಲ್ಲಿರುವ ಹೊಂಡದ ನೀರು ಕಾಲುವೆಗೆ ಹರಿದು ಹೋಗುತ್ತಿದೆ. ಮಳೆಯ ಆರ್ಭಟ ಮುಂದುವರೆದರೆ ರೇಣುಕಾ ದೇವಿ ದೇವಸ್ಥಾನಕ್ಕೆ ನೀರು ನುಗ್ಗುವ ಭೀತಿ ಇದೆ.
ಉಡುಪಿಯಲ್ಲಿ ತಣ್ಣಗಾದ ಮಳೆ; ಆದರೆ ನದಿ ಮಟ್ಟ ಕಡಿಮೆಯಾಗಿಲ್ಲ
ಇನ್ನೊಂದೆಡೆ ಸವದತ್ತಿ ತಾಲೂಕಿನ ಉಗರಗೋಳ ಹಳ್ಳ ರಭಸವಾಗಿ ಹರಿಯುತ್ತಿದ್ದು, ಬೈಕ್ ಸಮೇತ ಇಬ್ಬರು ಸವಾರರು ಕೊಚ್ಚಿ ಹೋಗಿದ್ದರು. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.
ಕುಂದಾನಗರಿ ಬೆಳಗಾವಿಯಲ್ಲಿ ಮಳೆರಾಯನ ಆರ್ಭಟ
ನಿನ್ನೆ ಇಡೀ ದಿನ ಕುಂದಾನಗರಿ ಬೆಳಗಾವಿಯಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಮಳೆಯಿಂದ ಬಳ್ಳಾರಿ ನಾಳೆಯ ಒಳಹರಿವು ಹೆಚ್ಚಿದೆ. ಬೆಳಿಗ್ಗೆಯಿಂದ ಮಳೆ ಆರ್ಭಟ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಇನ್ನೊಂದೆಡೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಖಾನಾಪುರ ತಾಲೂಕಿನ ಮಹಾದಾಯಿ ನದಿಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ
ಅಲ್ಲದೇ ಮಲಪ್ರಭಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಕೊಯ್ನಾ ಜಲಾಶಯಕ್ಕೆ ಒಳಹರಿವು ಜಾಸ್ತಿಯಾಗಿದೆ. ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಅಥಣಿ, ಬೈಲಹೊಂಗಲ ತಾಲೂಕಿನಾದ್ಯಂತ ನಿನ್ನೆ ಇಡೀ ದಿನ ಮಳೆಯಾಗಿದೆ.
ರಾಜ್ಯದೆಲ್ಲೆಡೆ ಮಳೆ ಅಬ್ಬರ, ಜಲಾಶಯಗಳ ನೀರಿನ ಮಟ್ಟ?
ಎಲ್ಲೆಲ್ಲಿ ಎಷ್ಟು ಮಳೆ?
ಬೆಳಗಾವಿ ಜಿಲ್ಲೆಯ ತಾಲೂಕುಗಳಲ್ಲಿ ಎಲ್ಲಿ ಎಷ್ಟು ಮಳೆಯಾಗಿದೆ ಎಂಬುವುದರ ಮಾಹಿತಿ ಇಲ್ಲಿದೆ. ಅಥಣಿ 91.5 ಮಿ.ಮೀ, ಬೈಲಹೊಂಗಲ 134.2 ಮಿ.ಮೀ, ಬೆಳಗಾವಿ 143 ಮಿ.ಮೀ, ಚಿಕ್ಕೋಡಿ 19.6 ಮಿ.ಮೀ, ಗೋಕಾಕ್ 33.2 ಮಿ.ಮೀ, ಹುಕ್ಕೇರಿ 65.4 ಮಿ.ಮೀ, ಖಾನಾಪುರ 211 ಮಿ.ಮೀ, ಕಿತ್ತೂರು 16.2 ಮಿ.ಮೀ, ರಾಯಭಾಗ 7.6 ಮಿ.ಮೀ, ರಾಮದುರ್ಗ 6.0 ಮಿ.ಮೀ, ಸವದತ್ತಿ 65.6 ಮಿ.ಮೀ ಮಳೆಯಾಗಿದೆ.
ಮಳೆ ಮುನ್ಸೂಚನೆ
ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳ ಕಾಲ ವರುಣನ ಅಬ್ಬರ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ರಾಜ್ಯದ ಕರಾವಳಿ ಭಾಗವೂ ಸೇರಿದಂತೆ 9 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲೂ ಅಧಿಕ ಮಳೆಯಾಗಲಿದೆ.