ಸಿದ್ದರಾಮಯ್ಯ ಮತ್ತೆ ಸಿಎಂ; ಮುಗಿದ ಅಧ್ಯಾಯ: ಸತೀಶ್ ಜಾರಕಿಹೊಳಿ
Recommended Video
ನವದೆಹಲಿ, ಮೇ 25: ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವ ಈಗಿನ ಪ್ರಸ್ತಾಪಗಳು ಮುಗಿದ ಅಧ್ಯಾಯ. ಮುಂದಿನ ನಾಲ್ಕು ವರ್ಷ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಹೇಳಿದಂತೆ ಪಾಲಿಸಬೇಕಷ್ಟೇ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಚಾರ ಪ್ರಸ್ತಾಪವಾಗಿತ್ತು. ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ಕೆಳಕ್ಕಿಳಿಯುವುದಾಗಿ ಹೇಳಿದ್ದರು. ಆದರೆ, ಅದಕ್ಕೆ ಸಭೆಯಲ್ಲಿ ಯಾರೂ ಒಪ್ಪಿಗೆ ಸೂಚಿಸಲಿಲ್ಲ ಎಂದು ಸತೀಶ್ ತಿಳಿಸಿದರು.
ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಿ, ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು. ಆದರೆ, ಸಭೆಯಲ್ಲಿ ಯಾರೂ ಒಪ್ಪಿಗೆ ಸೂಚಿಸಲಿಲ್ಲ. ಕುಮಾರಸ್ವಾಮಿ ಅವರೇ ಸಿಂಎ ಸ್ಥಾನದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಅವರ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರ ಜೊತೆ ರಮೇಶ್ ಜಾರಕಿಹೊಳಿ ತಡರಾತ್ರಿ ಚರ್ಚೆ
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಬಯಕೆ ಎನ್ನುವ ಶಾಸಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸತೀಶ್, ಅದೀಗ ಪ್ರಸ್ತುತವಲ್ಲ. ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರು ಯಾರೂ ಈ ರೀತಿ ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ನಿನ್ನೆ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ನಾಲ್ಕು ವರ್ಷದಲ್ಲಿ ದಲಿತ ಸಿಎಂ ವಿಚಾರ ಮಾನ್ಯತೆ ಪಡೆದುಕೊಳ್ಳುವುದಿಲ್ಲ. ಅಲ್ಲಿಯವರೆಗೂ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.
ಜೆಡಿಎಸ್ ಜತೆ ಹೊಂದಾಣಿಕೆಯೇ ಕಾರಣ
ಕಾಂಗ್ರೆಸ್ಗೆ ಈ ಸ್ಥಿತಿ ಬರಲು ಜೆಡಿಎಸ್ ಜತೆ ಮಾಡಿಕೊಂಡ ಹೊಂದಾಣಿಕೆಯೇ ಕಾರಣ. ದೊಡ್ಡ ಮಟ್ಟದ ಸೋಲಾಗಲು ಇದೇ ಕಾರಣವಿರಬಹುದು. ಜೆಡಿಎಸ್ ದ್ವೇಷಿಸುವವರು ಕಾಂಗ್ರೆಸ್ಅನ್ನೂ ದ್ವೇಷಿಸುವ ಹಾಗಾಗಿದೆ. ಜೆಡಿಎಸ್ನವರೂ ಕೂಡ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದರು. ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ನಾಲ್ಕು ವರ್ಷ ಸಮಯ ಇದೆ. ನಿನ್ನೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.
ರಮೇಶ್ ಜಾರಕಿಹೊಳಿ ದೆಹಲಿಗೆ, ಸರ್ಕಾರಕ್ಕೆ ಮತ್ತೆ ಆತಂಕ
ರಾಜೀನಾಮೆ ಬಿಡುಗಡೆಯಾಗದ ಸಿನಿಮಾ
ರಮೇಶ್ ಜಾರಕಿಹೊಳಿ ರಾಜೀನಾಮೆ ಬಿಡುಗಡೆಯಾಗದ ಸಿನಿಮಾ. ಚಂದ್ರಶೇಖರ ಕಂಬಾರ ಅವರು 40 ವರ್ಷಗಳ ಹಿಂದೆ 'ಕರಿಮಾಯಿ' ಸಿನಿಮಾ ಮಾಡಿದ್ದರು. ಅದಿನ್ನೂ ಬಿಡುಗಡೆಯಾಗಿಲ್ಲ. ಅದೇ ರೀತಿ ರಮೇಶ್ ರಾಜೀನಾಮೆ ಸಿನಿಮಾ. ನಾಳೆ, ನಾಡಿದ್ದು ರಾಜೀನಾಮೆ ಕೊಡುತ್ತೇನೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ, ಅದು ಆಗುವುದಿಲ್ಲ ಎಂದು ಲೇವಡಿ ಮಾಡಿದರು.
ಬೇರೆ ಬೇಡಿಕೆ ಗೊತ್ತಿಲ್ಲ
ರಮೇಶ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಎರಡು ತಿಂಗಳಿನಿಂದ ಆಫರ್ ಕೊಡುತ್ತಲೇ ಇದ್ದೇವೆ. ಆದರೆ, ಅವರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರ ಬೇರೆ ಬೇಡಿಕೆ ಏನಿದೆಯೆಂದು ನಮಗೆ ಗೊತ್ತಿಲ್ಲ. ನಮ್ಮ ಕಡೆಯಿಂದ ಸಚಿವ ಸ್ಥಾನ ಕೊಡುವುದಷ್ಟೇ ನಮಗೆ ಇರುವ ಅವಕಾಶ ಎಂದರು.
ಜಾರಕಿಹೊಳಿ ನೇತೃತ್ವದ ಅತೃಪ್ತರ ಸಭೆ: ಸಾಮೂಹಿಕ ರಾಜೀನಾಮೆಗೆ ರೆಡಿ?
ರಮೇಶ್ ಕುಮಾರ್ ಕ್ರಮ ಕೈಗೊಳ್ಳಲಿ
ರಮೇಶ್ ಜಾರಕಿಹೊಳಿ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪಕ್ಷದಿಂದ ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಸ್ಪೀಕರ್ ಅವರೇ ನಿರ್ಧಾರ ಕೈಗೊಳ್ಳಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಎಂದಿಗೂ ಸುಭದ್ರವಾಗಿ ಇರಲಿದೆ. ಆದರೆ ಇಂತಹ ಅಡ್ಡಿ ಇದ್ದೇ ಇರುತ್ತದೆ ಎಂದು ಹೇಳಿದರು.