ಎಚ್.ವಿಶ್ವನಾಥ್ ಅನರ್ಹ ವಿಚಾರ: ರಮೇಶ್ ಜಾರಕಿಹೊಳಿ ಮಹತ್ವದ ಹೇಳಿಕೆ
ಬೆಳಗಾವಿ, ಡಿಸೆಂಬರ್ 1: ಎಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂಬ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ವಿಚಾರವಾಗಿ ಮಾತನಾಡಿರುವ ಸಚಿವ ರಮೇಶ್ ಜಾರಕಿಹೊಳಿ, ತಕ್ಷಣ ಸುಪ್ರೀಂ ಕೋರ್ಟ್ಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ, ಈಗಾಗಲೇ ಬೆಂಗಳೂರು ಹಾಗೂ ದೆಹಲಿ ವಕೀಲರ ಜೊತೆ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದರು.
ಎಚ್.ವಿಶ್ವನಾಥ್ಗೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ತಿರುಗೇಟು
17 ಶಾಸಕರ ಅನರ್ಹತೆ ಬಗ್ಗೆ ಮೂಲ ಸುಪ್ರೀಂಕೋರ್ಟ್ ಆದೇಶ ಇದ್ದು, ಅದನ್ನೇ ಇಟ್ಟುಕೊಂಡು ನಾವು ಸುಪ್ರೀಂ ಕೋರ್ಟ್ಗೆ ಮನವಿ ಮಾಡುತ್ತೇವೆ. ಎಚ್.ವಿಶ್ವನಾಥ್ ಏನು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ, ಸಂಪುಟ ಪುನಾರಚನೆ ಮಾಡುವುದು ಸಿಎಂ ಪರಮಾಧಿಕಾರ ಎಂದು ತಿಳಿಸಿದರು.
ಡಿಸೆಂಬರ್ 4 ರಂದು ಬಿಜೆಪಿ ಕೋರ್ ಕಮಿಟಿ ಸಭೆ
ಎಲ್ಲಾ ಮಿತ್ರಮಂಡಳಿ ಶಾಸಕರು ಹಾಗೂ ಬಿಜೆಪಿ ಶಾಸಕರು ಸೇರಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಲಿದ್ದೇವೆ ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಇದೇ ವೇಳೆ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಡಿಸೆಂಬರ್ 4 ರಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪ ಚುನಾವಣೆ ಅಭ್ಯರ್ಥಿ ಆಯ್ಕೆ
ಕೋರ್ ಕಮಿಟಿ ಸಭೆ ನಂತರ ಡಿಸೆಂಬರ್ 5 ರಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಲಿ ಎಂದು ಮಾಹಿತಿ ನೀಡಿದ ನಿರ್ಮಲ್ ಕುಮಾರ್ ಸುರಾನಾ, ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ ಎಂದರು. ಬೆಳಗಾವಿ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣೆ ಸಿದ್ಧತೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಬಿಎಸ್ವೈ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ: ಬಸವರಾಜ್ ಬೊಮ್ಮಾಯಿ
ಅರುಣ್ ಸಿಂಗ್, ಸಿ.ಟಿ ರವಿ ಭಾಗಿ
ಡಿಸೆಂಬರ್ 5 ರಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ನಡೆಯಲಿದ್ದು, ಅರುಣ್ ಸಿಂಗ್, ಸಿ.ಟಿ ರವಿ, ನಳಿನ್ ಕುಮಾರ್ ಕಟಿಲ್, ಸಿಎಂ ಯಡಿಯೂರಪ್ಪ ಭಾಗಿವಹಿಸಲಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೇಲುಗೈ ಸಾಧಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ನಿರ್ಮಲ್ ಕುಮಾರ್ ಸುರಾನಾ ಹೇಳಿದರು.
ನಿರ್ಮಲ್ ಕುಮಾರ್ ಸುರಾನಾ ಮಾಹಿತಿ
ಕೊರೊನಾ ಹಿನ್ನೆಲೆಯಲ್ಲಿ ವೆಬೆಕ್ಸ್ ಮೂಲಕವೂ ಮುಖಂಡರು ಭಾಗಿಯಾಗಲಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು, ಮೋರ್ಚಾಗಳು ಸೇರಿ 149 ಪದಾಧಿಕಾರಿಗಳು ಭಾಗಿವಹಿಸುತ್ತಾರೆ.
ವೆಬೆಕ್ಸ್ ಮೂಲಕ ರಾಜ್ಯ ಕಾರ್ಯಕಾರಣಿ ಸಭೆ ಸದಸ್ಯರು, ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು ಸೇರಿ 434 ಜನರು ಭಾಗಿಯಾಗಲಿದ್ದಾರೆ ಎಂದು ಬೆಳಗಾವಿಯಲ್ಲಿ ನಿರ್ಮಲ್ ಕುಮಾರ್ ಸುರಾನಾ ಮಾಹಿತಿ ಹಂಚಿಕೊಂಡರು.