ಗೋಕಾಕ್ ಸಾಹುಕಾರ್ ಗೆ ಬಂತು 'ಭೀಮ' ಬಲ
ಬೆಳಗಾವಿ, ನವೆಂಬರ್ 22: ಡಿಸೆಂಬರ್ 05 ರಂದು ನಡೆಯಲಿರುವ ಉಪ ಚುನಾವಣಾ ಮತದಾನ ಸಮೀಪಿಸುತ್ತಿದ್ದಂತೆಯೇ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬೆಳಗಾವಿ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗ ಜಾರಕಿಹೊಳಿ ಫ್ಯಾಮಿಲಿ ಪಾಲಿಟಿಕ್ಸ್ ನಿಂದ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ.
ಹೌದು, ಉಪ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಜಾರಕಿಹೊಳಿ ಕುಟುಂಬದಿಂದ ಮತ್ತೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಗೋಕಾಕ್ ಸಾಹುಕಾರ್ ಎಂದೇ ಕರೆಸಿಕೊಳ್ಳುವ ರಮೇಶ್ ಜಾರಕಿಹೊಳಿಗೆ ಉಪ ಚುನಾವಣೆಯ ಈ ಸಮಯದಲ್ಲಿ ಸಿಹಿ ಸುದ್ದಿ ಲಭಿಸಿದೆ.
ರಮೇಶ್ ಜಾರಕಿಹೊಳಿಗೆ ಬಿಜೆಪಿ ವರಿಷ್ಠರಿಂದ ಖಡಕ್ ಸೂಚನೆ
ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ್ ಜಾರಕಿಹೊಳಿಗೆ ಬೆಂಬಲಕ್ಕೆ ಅವರ ಇನ್ನೊಬ್ಬ ಸಹೋದರ ಭೀಮಶಿ ಜಾರಕಿಹೊಳಿ ನಿಂತಿದ್ದಾರೆ. ರಮೇಶ್ ಅವರ ಪರವಾಗಿ ಚುನಾವಣಾ ಆಖಾಡಕ್ಕಿಳಿಯಲಿದ್ದಾರೆ. ರಮೇಶ್ ಹಾಗೂ ಬಿಜೆಪಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಬೆಳಗಾವಿ ಸಾಹುಕಾರ್ ಗೆ ಆನೆ ಬಲ ಬಂದಂತಾಗಿದೆ.
ತಮ್ಮ ಪರವಾಗಿ ಈಗ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಹೋದರ ಭೀಮಶಿ ಜಾರಕಿಹೊಳಿ ಕೈಜೋಡಿಸಿರುವುದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ವಿರೋಧಿ ಬಣದಲ್ಲಿ ಸಹೋದರರಾದ ಲಖನ್ ಮತ್ತು ಸತೀಶ್ ಜಾರಕಿಹೊಳಿ ಇದ್ದಾರೆ. ಒಂದೇ ಕ್ಷೇತ್ರದಲ್ಲಿ ಐದು ಜನ ಜಾರಕಿಹೊಳಿ ಬ್ರದರ್ಸ್ ಎಂಟ್ರಿಯಿಂದಾಗಿ ಗೋಕಾಕ್ ಕ್ಷೇತ್ರ ಈಗ 'ಸಹೋದರರ ಸವಾಲ್' ಎನಿಸಿಕೊಂಡಿದೆ.
ಲಕ್ಷ್ಮೀ ಮೇಲೆ ರಮೇಶ್ ಜಾರಕಿಹೊಳಿಗೆ ಯಾಕಿಷ್ಟು ಕೋಪ: ಕಾರಣ ಇಲ್ಲಿದೆ
2008 ರಲ್ಲಿ ರಮೇಶ್ ಜಾರಕಿಹೊಳಿ ವಿರುದ್ದವೇ ಸ್ಪರ್ಧಿಸಿದ್ದ ಭೀಮಶಿ ಆಗ ಸೋತಿದ್ದರು. ಈಗ ರಮೇಶ್ ಅವರನ್ನು ಭೇಟಿಯಾಗಿ ಬೆಂಬಲ ನೀಡುವುದಾಗಿಯೂ ಮತ್ತು ಪ್ರಚಾರದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ಪ್ರಭಾವಿ ಹೊಂದಿರುವ ಕುಟುಂಬವೆಂದರೆ ಅದು ಜಾರಕಿಹೊಳಿ ಕುಟುಂಬ.
ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಸತೀಶ್ ಜಾರಕಿಹೊಳಿ ನಿಂತಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಅಶೋಕ್ ಪೂಜಾರಿ ಕಣಕ್ಕಿಳಿದಿದ್ದಾರೆ. ಭೀಮಶಿ ಜಾರಕಿಹೊಳಿ ಉಪ ಚುನಾವಣೆಯಲ್ಲಿ ರಮೇಶ್ ಪರ ನಿಂತಿರುವುದು ಲಖನ್ ಗೆ ಹಿನ್ನಡೆಯೆಂದೇ ಹೇಳಬಹುದು. ತ್ರಿಕೋನ ಸ್ಪರ್ಧೆಯಿಂದ ಕೂಡಿರುವ ಗೋಕಾಕ್ ಕ್ಷೇತ್ರದಲ್ಲಿ ಕೊನೆಯದಾಗಿ ಮತದಾರ ಯಾರಿಗೆ ಒಲಿಯಲಿದ್ದಾರೆ ಕಾದು ನೋಡಬೇಕು.